ಕಾಸರಗೋಡು: ವಿಶ್ವ ತಂಬಾಕು ರಹಿತ ದಿನಾಚರಣೆಗೆ ಸಂಬಂಧಿಸಿದಂತೆ, ಜಿಲ್ಲಾ ತಂಬಾಕು ವಿರೋಧಿ ಸಮನ್ವಯ ಸಮಿತಿಯ ಸಭೆ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಕಚೇರಿಯಲ್ಲಿ ಜರುಗಿತು.
ಕಾಸರಗೋಡು ಎಡಿಎಂ ಕೆ.ವಿ. ಶ್ರುತಿ ಅಧ್ಯಕ್ಷತೆ ವಹಿಸಿದ್ದರು. ಮೇ 31ನೇ ತಾರೀಕನ್ನು ತಂಬಾಕು ರಹಿತ ದಿನವನ್ನಾಗಿ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾತರಗತಿ ಪುನರಾರಂಭಗೊಳ್ಳುವ ಮೊದಲ ವಾರದಲ್ಲಿ ಜಿಲ್ಲೆಯ ಶಾಲೆಗಳಲ್ಲಿ ತಂಬಾಕು ವಿರೋಧಿ ಪ್ರತಿಜ್ಞೆಯನ್ನು ಆಯೋಜಿಸಲಾಗುವುದು. ಅಬಕಾರಿ ಇಲಾಖೆಯ ನೇತೃತ್ವದಲ್ಲಿ ಜಿಲ್ಲೆಯಲ್ಲಿ ತಂಬಾಕು ವಿರೋಧಿ ರ್ಯಾಲಿ ಮತ್ತು ತರಗತಿ ನಡೆಸಲಾಗುವುದು. ಪೆÇಲೀಸ್ ಇಲಾಖೆ 'ಆಪರೇಷನ್ ತೂಫಾನ್' ಹೆಸರಿನಲ್ಲಿ ಜಿಲ್ಲೆಯಲ್ಲಿ ಮದ್ಯ, ಮಾದಕ ದ್ರವ್ಯ ಮತ್ತು ತಂಬಾಕು ಉತ್ಪನ್ನಗಳ ವಿರುದ್ಧ ಕಾರ್ಯಾಚರಣೆ ನಡೆಸಲಿದೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಕೇಂದ್ರ ಸರ್ಕಾರದ ದತ್ತಾಂಶವು ಮಕ್ಕಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚುತ್ತಿರುವುದನ್ನು ಸೂಚಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಂಬಾಕು ವಿರೋಧಿ ಚಟುವಟಿಕೆಗಳನ್ನು ತೀವ್ರಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕೇರಳದಲ್ಲಿ ಒಟ್ಟು ತಂಬಾಕು ಸೇವನೆಯು ಶೇಕಡಾ 21.4 ರಿಂದ ಶೇಕಡಾ 12.7 ಕ್ಕೆ ಕಡಿತಗೊಂಡಿದ್ದರೂ, 12 ರಿಂದ 15 ವರ್ಷ ವಯಸ್ಸಿನ ಮಕ್ಕಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶಾಲೆಗಳು ಮತ್ತು ಪ್ರಮುಖ ಕೇಂದ್ರಗಳಲ್ಲಿ ತಂಬಾಕು ವಿರೋಧಿ ಸೂಚನಾ ಫಲಕ ಅಳವಡಿಸುವುದರ ಜತೆಗೆ ಜಾಗೃತಿ ಮೂಡಿಸುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಿಲ್ಲೆಯ 171 ಶಿಕ್ಷಣ ಸಂಸ್ಥೆಗಳನ್ನು ತಂಬಾಕುಮುಕ್ತ ವಲಯವಾಗಿ ಘೋಷಿಸಲಾಗಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೆ ತರಬೇಕಾದ ತಂಬಾಕುವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಯೋಜಿಸಲು ಸ್ಥಳೀಯ ಸಂಸ್ಥೆ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ತಂಬಾಕು ನಿಯಂತ್ರಣದ ಬಗ್ಗೆ ಕೈಗೊಳ್ಳಬೇಕಾದ ಜಾಗೃತಿ ಕಾರ್ಯಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ. 2003ರ ತಂಬಾಕು ನಿಯಂತ್ರಣ ಕಾಯ್ದೆ ಸಮಗ್ರವಾಗಿ ಅನುಷ್ಠಾನಗೊಳಿಸುವ ಹಾಗೂ ಮೇ 31 ರಿಂದ ಜೂನ್ 26 ರವರೆಗೆ ಜಾರಿಗೆ ತರಬೇಕಾದ ತಂಬಾಕು ವಿರೋಧಿ ಚಟುವಟಿಕೆಗಳ ಯೋಜನೆ ಕುರಿತು ಚರ್ಚೆ ನಡೆಸಲಾಯಿತು.



