ನವದೆಹಲಿ (PTI): 'ಬಾಲಕಿಗೆ ಬಲವಂತವಾಗಿ ಗರ್ಭ ಧರಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ' ಎಂದು ಹೇಳಿರುವ ಸುಪ್ರೀಂ ಕೋರ್ಟ್, ಅತ್ಯಾಚಾರ ಸಂತ್ರಸ್ತೆಯರಿಗೆ 20 ವಾರಗಳ ಬಳಿಕವೂ ಗರ್ಭಪಾತಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾನೂನು ತಿದ್ದುಪಡಿ ಮಾಡಬೇಕು' ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
15 ವರ್ಷದ ಬಾಲಕಿಯ 30 ವಾರಗಳ ಗರ್ಭಧಾರಣೆಗೆ ಸುಪ್ರೀಂ ಕೋರ್ಟ್ ಈ ಹಿಂದೆ ಅವಕಾಶ ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸಲ್ಲಿಸಿದ ಮನವಿಗೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯಾ ಬಾಗ್ಚಿ ನೇತೃತ್ವದ ನ್ಯಾಯಪೀಠ, ಮಕ್ಕಳು ಸೇರಿದಂತೆ ಅತ್ಯಾಚಾರ ಸಂತ್ರಸ್ತರ ದೂರಗಾಮಿ ಪರಿಣಾಮ ಗಳನ್ನು ಗಮನದಲ್ಲಿರಿಸಿಕೊಂಡು ಈ ನಿರ್ದೇಶನ ನೀಡಿದೆ.
'ಅತ್ಯಾಚಾರ ಸೇರಿದಂತೆ ಇತರೆ ಕಾರಣಗಳಿಂದ ಗರ್ಭಧಾರಣೆಯಾದರೆ 20 ವಾರಗಳ ನಂತರವೂ ಗರ್ಭಪಾತಕ್ಕೆ ಅವಕಾಶ ಮಾಡಿಕೊಡುವಂತೆ ಕಾನೂನಿನಲ್ಲಿ ತಿದ್ದುಪಡಿ ತರಬೇಕು' ಎಂದು ತಿಳಿಸಿದೆ.
'ಒಂದೊಮ್ಮೆ ಅತ್ಯಾಚಾರಕ್ಕೊಳ ಗಾದ ಬಾಲಕಿ ಗರ್ಭಪಾತಕ್ಕೆ ಅವಕಾಶ ನೀಡದಿದ್ದರೆ ಜೀವನಪೂರ್ತಿ ಆಘಾತ ಎದುರಿಸಬೇಕಾಗುತ್ತದೆ. ಗರ್ಭಪಾತದ ವೇಳೆ ತಾಯಿಯು ಶಾಶ್ವತ ಅಂಗವಿಕಲತೆಗೆ ಒಳಗಾಗುವ ಸಾಧ್ಯತೆ ಇರದಿದ್ದರೆ, ಗರ್ಭಪಾತ ಮಾಡಬಹುದು. ಮೇ 4ರೊಳಗೆ ಗರ್ಭಪಾತ ಮಾಡದೇ ಇದ್ದರೆ ನ್ಯಾಯಾಂಗ ನಿಂದನೆ ಎಂದೇ ಪರಿಗಣಿಸಬೇಕಾಗುತ್ತದೆ' ಎಂದು ಪೀಠ ಎಚ್ಚರಿಸಿದೆ.
'ಇದು ಮರುಪರಿಶೀಲನಾ ಅರ್ಜಿಯಾಗಿದೆ. ಬಲವಂತವಾಗಿ ಗರ್ಭ ಧರಿಸುವಂತೆ ಹೇಳಲು ಸಾಧ್ಯವಿಲ್ಲ. ಆಕೆ ಬಾಲಕಿ. ಓದುತ್ತಿದ್ದಾಳೆ. ನಾವು ಆಕೆಯನ್ನು ತಾಯಿ ಮಾಡಲು ಹೊರಟಿದ್ದೇವೆ. ಆಕೆಯ ನೋವು, ಅವಮಾನವನ್ನು ಊಹಿಸಿಕೊಳ್ಳಿ. ಈ ವಿಚಾರದಲ್ಲಿ ಸಂತ್ರಸ್ತೆಯ ಪೋಷಕರಿಗೆ ಏಮ್ಸ್ ವೈದ್ಯರು ಸಲಹೆಗಳನ್ನು ನೀಡಬೇಕು' ಎಂದು ತಿಳಿಸಿದೆ.
'ದತ್ತು ಪಡೆಯುವುದಕ್ಕಾಗಿಯೇ ಸಾಕಷ್ಟು ಮಕ್ಕಳಿವೆ. ಬೀದಿಯಲ್ಲಿ ಬದುಕುತ್ತಿರುವ ಸಾಕಷ್ಟು ಅನಾಥ ಮಕ್ಕಳಿವೆ. ಅವರ ಮೇಲೆ ಮಾಫಿಯಾಗಳಿಂದ ಕ್ರೌರ್ಯಗಳು ನಡೆಯುತ್ತಿವೆ. ನಾವು ಅದನ್ನು ಗಮನಿಸಬೇಕು. ಇದು 15 ವರ್ಷದ ಬಾಲಕಿಗೆ ಬೇಡದ ಗರ್ಭಧಾರಣೆ ಯಾಗಿದೆ' ಎಂದು ಪೀಠ ಹೇಳಿದೆ.
ಈ ವೇಳೆ ಏಮ್ಸ್ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ, 'ಬಾಲಕಿಯ ಈಗಿನ ಸ್ಥಿತಿಯಲ್ಲಿ ಗರ್ಭಪಾತ ಮಾಡಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ಏಮ್ಸ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ. ಬಾಲಕಿಯು 30 ವಾರ ಗರ್ಭಿಣಿಯಾಗಿರುವ ಕಾರಣ, ಗರ್ಭಪಾತ ಮಾಡಿದರೆ ಮುಂದೆ ಆಕೆಗೆ ಜನಿಸುವ ಮಗು ವಿರೂಪಗೊಳ್ಳುವ ಸಾಧ್ಯತೆಯಿದೆ. ಬಾಲಕಿಯು ಮುಂದೆ ಯುವತಿಯಾದ ನಂತರ ಜೀವನಪರ್ಯಂತ ಆರೋಗ್ಯದ ಸಮಸ್ಯೆ ಎದುರಿಸಬಹುದು. ಮತ್ತೆ ಮಗು ಹೆರಲು ಅಸಾಧ್ಯವಾಗಲೂಬಹುದು' ಎಂದು ಪೀಠದ ಗಮನಸೆಳೆದರು.
ಈ ವಿಚಾರದಲ್ಲಿ ಬಾಲಕಿ ಹಾಗೂ ತಾಯಿಯ ಆಪ್ತ ಸಮಾಲೋಚನೆ ನಡೆಸಲು ಅನುಮತಿ ನೀಡುವಂತೆ ನ್ಯಾಯಾಲಯವನ್ನು ಕೋರಿದರು. ಇದಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿಸಿದ್ದು, ಸೂಕ್ತ ನಿರ್ಧಾರ ಕೈಗೊಳ್ಳುವಂತೆ ತಿಳಿಸಿದೆ.

