ಲಕ್ನೋ: ಉತ್ತರ ಪ್ರದೇಶದ ವಿವಿಧೆಡೆಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ಬಿಸಿಲ ಬೇಗೆಯಿಂದ ಜನ ಕಂಗೆಟ್ಟಿದ್ದಾರೆ. ದೇಶದಲ್ಲೇ ಅತ್ಯಧಿಕ ತಾಪಮಾನ ಬಾಂದಾದಲ್ಲಿ ದಾಖಲಾಗಿದ್ದು, ಸುಮಾರು 48 ಡಿಗ್ರಿ ಉಷ್ಣಾಂಶದ ಹಿನ್ನೆಲೆಯಲ್ಲಿ, ಮಧ್ಯಾಹ್ನದ ಬಿಸಿಲ ಝಳದಿಂದಾಗಿ ನಗರ ರಸ್ತೆಗಳಲ್ಲಿ ವಾಹನ ಸಂಚಾರ ಮುಕ್ತಗೊಳಿಸುವ ನಿಟ್ಟಿನಲ್ಲಿ ಟ್ರಾಫಿಕ್ ಸಿಗ್ನಲ್ಗಳನ್ನು ಸ್ವಿಚ್ ಆಫ್ ಮಾಡಲಾಗಿದೆ.
ಇದರಿಂದಾಗಿ ಜನತೆ ಸುಡುಬಿಸಿಲಲ್ಲಿ ಸಿಗ್ನಲ್ಗಳ ಮುಂದೆ ಕಾಯುವುದು ತಪ್ಪಿದಂತಾಗಿದೆ.
ಬಾಂದಾ ನಗರದಲ್ಲಿ ಶುಕ್ರವಾರ ದೇಶದಲ್ಲೇ ಅತ್ಯಧಿಕ ಅಂದರೆ ಶೇಕಡ 47.6 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಸುಮಾರು ಒಂದು ವಾರದಿಂದ ಈ ಜಿಲ್ಲೆಯಲ್ಲಿ 45 ಡಿಗ್ರಿ ಸೆಲ್ಷಿಯಸ್ಗಿಂತ ಅಧಿಕ ಉಷ್ಣಾಂಶ ಇದೆ.
"ಕರ್ಕಾಟಕ ಸಂಕ್ರಾಂತಿ ವೃತ್ತಕ್ಕೆ ತೀರಾ ಸನಿಹದಲ್ಲಿರುವುದು, ಶುಭ್ರ ಆಕಾಶ, ಮಣ್ಣಿನ ತೇವಾಂಶ ಕಡಿಮೆ ಇರುವುದು, ಎತ್ತರದ ಬಯಲು ಪ್ರದೇಶ, ನದಿಗಳು ಒಣಗಿರುವುದು, ಅರಣ್ಯನಾಶ ಮತ್ತು ಗಣಿಗಾರಿಕೆ ತಾಪಮಾನ ಏರಿಕೆಗೆ ಪ್ರಮುಖ ಕಾರಣಗಳು" ಎಂದು ಹವಾಮಾನ ತಜ್ಞ ಡಾ. ದಿನೇಶ್ ಹೇಳಿದ್ದಾರೆ.
"ಕರ್ತವ್ಯ ನಿರತ ಸಂಚಾರಿ ಪೊಲೀಸರಿಗೆ ಕೊಡೆ ಹಾಗೂ ಶಿರವಸ್ತ್ರಗಳನ್ನು ನೀಡಲಾಗಿದೆ; ಅಂತೆಯೇ ಪ್ರಯಾಣಿಕರ ಆರಾಮದಾಯಕ ಮತ್ತು ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಸುಡುಬಿಸಿಲಿನಿಂದ ತಪ್ಪಿಸಿಕೊಳ್ಳಲು ಆಸರೆ ಪಡೆಯುವ ಸಲುವಾಗಿ ಪ್ರಮುಖ ವೃತ್ತಗಳಲ್ಲಿ ತಂಗುದಾಣಗಳನ್ನು ಜಿಲ್ಲಾಡಳಿತ ನಿರ್ಮಿಸಿದೆ" ಎಂದ ಹೆಚ್ಚುವರಿ ಎಸ್ಪಿ ಶಿವರಾಜ್ ಪ್ರಜಾಪತಿ ಹೇಳಿದ್ದಾರೆ.
ಮಧ್ಯಾಹ್ನದ ಸುಡುಬಿಸಿಲಲ್ಲಿ ಟ್ರಾಫಿಕ್ ಸಿಗ್ನಲ್ಗಳಲ್ಲಿ ಅನಗತ್ಯವಾಗಿ ಕೆಂಪ ದೀಪದ ಮುಂದೆ ವಾಹನ ಸವಾರರು ಕಾಯುವುದನ್ನು ತಪ್ಪಿಸುವ ಉದ್ದೇಶದಿಂದ ತಾತ್ಕಾಲಿಕವಾಗಿ ಸಿಗ್ನಲ್ ಲೈಟ್ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಪ್ರಯಾಣಿಕರಿಗೆ ಅನಾನುಕೂಲವನ್ನು ಕನಿಷ್ಠಗೊಳಿಸುವುದು ಇದರ ಉದ್ದೇಶ ಎಂದು ವಿವರಿಸಿದ್ದಾರೆ.
ಉತ್ತರ ಪ್ರದೇಶದಾದ್ಯಂತ ಗುರುವಾರದಿಂದ ಮೂರು ದಿನಗಳವರೆಗೆ ತೀವ್ರ ಉಷ್ಣಮಾರುತದ ರೆಡ್ ಅಲರ್ಟ್ ಘೋಷಿಸಲಾಗಿದೆ. ಆ ಬಳಿಕ ಆರೆಂಜ್ ಅಲರ್ಟ್ ಇರುತ್ತದೆ. ರಾಜ್ಯದ ವಿವಿಧೆಡೆಗಳಲ್ಲಿ ರಾತ್ರಿಯ ತಾಪಮಾನ ಕೂಡಾ ಅಧಿಕ ಇರಲಿದೆ ಎಂದು ಲಕ್ನೋ ಹವಾಮಾನ ಕೇಂದ್ರ ಎಚ್ಚರಿಸಿದೆ.

