ನವದೆಹಲಿ: ದೇವಾಲಯಗಳಲ್ಲಿರುವ ಚಿನ್ನದ ನಿಕ್ಷೇಪಗಳಿಗೆ ಬದಲಾಗಿ ಚಿನ್ನದ ಬಾಂಡ್ಗಳನ್ನು ನೀಡಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರವು, ದೇಶಾದ್ಯಂತ ದೇವಾಲಯ, ಟ್ರಸ್ಟ್ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಚಿನ್ನಕ್ಕೆ ಬದಲಾಗಿ ಹಣಗಳಿಸುವ ಯೋಜನೆಯನ್ನು ಪರಿಚಯಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂಬುದು ಸುಳ್ಳು ಸುದ್ದಿ. ಇದು ಆಧಾರ ರಹಿತ ಎಂದು ಹೇಳಿದೆ.
ಈ ಕುರಿತು ಮಂಗಳವಾರ ಅಧಿಕೃತ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ದೇವಾಲಯದ ಚಿನ್ನದ ನಿಕ್ಷೇಪಗಳಿಗೆ ಬದಲಾಗಿ ಕೇಂದ್ರವು ದೇವಾಲಯಗಳಿಗೆ ಚಿನ್ನದ ಬಾಂಡ್ಗಳನ್ನು ನೀಡಲು ಯೋಜಿಸುತ್ತಿದೆ ಅಥವಾ ದೇವಾಲಯದ ಚಿನ್ನದ ನಿಕ್ಷೇಪಗಳಿಂದ ಹಣಗಳಿಸುವ ಪ್ರಸ್ತಾಪವನ್ನು ಅನುಮೋದಿಸಿದೆ ಎನ್ನುವ ಕೆಲವು ಮಾಧ್ಯಮ ವರದಿಗಳು ಸುಳ್ಳು, ಇದು ನಾಗರಿಕರನ್ನು ದಾರಿತಪ್ಪಿಸುವ ಮತ್ತು ಯಾವುದೇ ಆಧಾರ ರಹಿತವಾದ ವರದಿಯಾಗಿದೆ ಎಂದು ತಿಳಿಸಿದೆ.
ದೇವಾಲಯಗಳ ಗೋಪುರಗಳು, ಬಾಗಿಲುಗಳು ಅಥವಾ ಇತರ ರಚನೆಗಳ ಮೇಲೆ ಹಾಕಿರುವ ಚಿನ್ನದ ತಟ್ಟೆಗಳನ್ನು ಭಾರತದ ಚಿನ್ನದ ನಿಕ್ಷೇಪಗಳು ಎಂದು ಪರಿಗಣಿಸಲಾಗುತ್ತದೆ ಎಂಬ ಹೇಳಿಕೆಗಳನ್ನು ಕೂಡ ತಳ್ಳಿ ಹಾಕಿರುವ ಸರ್ಕಾರ, ಇದು ಕೂಡ ಆಧಾರ ರಹಿತವಾದ ಸುಳ್ಳು ವರದಿಗಳು ಎಂದು ಹೇಳಿದೆ.
ಸಾರ್ವಜನಿಕರು ಅಂತಹ ವದಂತಿಗಳನ್ನು ನಂಬಬಾರದು. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು. ಯಾವುದೇ ಮಾಹಿತಿಯ ಸತ್ಯಾಸತ್ಯತೆಯನ್ನು ತಿಳಿಯದೆ ಹಂಚಿಕೊಳ್ಳುವುದು ನಾಗರಿಕರಿಗೆ ಗೊಂದಲ ಉಂಟು ಮಾಡಬಹುದು ಮತ್ತು ಸಾರ್ವಜನಿಕರನ್ನು ದಾರಿತಪ್ಪಿಸಬಹುದು ಎಂದು ಎಚ್ಚರಿಸಿದೆ.
ಸರ್ಕಾರದ ಯಾವುದೇ ನೀತಿ, ನಿರ್ಧಾರ, ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ಅಧಿಕೃತ ವೆಬ್ ಸೈಟ್ ಗಳನ್ನು ಪರಿಶೀಲಿಸುವಂತೆ ಸಲಹೆ ನೀಡಿರುವ ಸಚಿವಾಲಯ, ಯಾವುದೇ ಹೊಸ ನೀತಿ ಘೋಷಣೆಯನ್ನು ಅಧಿಕೃತ ಪತ್ರಿಕಾ ಪ್ರಕಟಣೆಗಳು, ಸರ್ಕಾರಿ ವೆಬ್ಸೈಟ್ಗಳ ಮೂಲಕ ತಿಳಿಸಲಾಗುವುದು ಎಂದು ಹೇಳಿದೆ.
ಸರ್ಕಾರದ ನೀತಿಗಳ ಬಗ್ಗೆ ಸುಳ್ಳು ವದಂತಿಗಳು ಹಬ್ಬುವುದು ಇದು ಮೊದಲೇನಲ್ಲ. ಮೇ ತಿಂಗಳ ಆರಂಭದಲ್ಲಿ ಭಾರತದ ಜವಳಿ ಮರುಬಳಕೆ ಪರಿಸರ ವ್ಯವಸ್ಥೆಯ ಕುರಿತು ದಾರಿತಪ್ಪಿಸುವ ಸುಳ್ಳು ಸುದ್ದಿಯೊಂದು ಪ್ರಸಾರವಾಗಿತ್ತು. ಇದರ ಬಳಿಕ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡಿ, ದೇಶವು ಸುದೀರ್ಘ ಇತಿಹಾಸವನ್ನು ಹೊಂದಿರುವ ಮರುಬಳಕೆ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ವಿಶ್ವದ ಅತಿದೊಡ್ಡ ಜವಳಿ ಮರುಬಳಕೆ ಜಾಲಗಳನ್ನು ಹೊಂದಿದೆ. ಎಂದು ಸ್ಪಷ್ಟಪಡಿಸಿತ್ತು. ಇದಕ್ಕೆ ಸಂಬಂಧಿಸಿ ವಿದೇಶಿ ಮಾಧ್ಯಮವೊಂದು ಪಾಣಿಪತ್ನಂತಹ ಕ್ಲಸ್ಟರ್ ಅನ್ನು ಕೇಂದ್ರೀಕರಿಸಿ ಪರಿಸರ ಮತ್ತು ಔದ್ಯೋಗಿಕ ಕಾಳಜಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ವರದಿ ಮಾಡಿತ್ತು.

