ತಿರುವನಂತಪುರ: ಕೇರಳದಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಕಾಂಗ್ರೆಸ್ ಪಾಲಿಗೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯ ನಂತರ ಕಾಂಗ್ರೆಸ್ ನಾಯಕರು ಮತ್ತು ಶಾಸಕರು ತಮ್ಮ ಅಭಿಪ್ರಾಯಗಳನ್ನು ಎಐಸಿಸಿ ವೀಕ್ಷಕರಿಗೆ ತಿಳಿಸಿದ್ದಾರೆ.
ಕೇರಳದಲ್ಲಿ ಮುಂದಿನ ಮುಖ್ಯಮಂತ್ರಿ ಆಯ್ಕೆ ಭಾನುವಾರದೊಳಗೆ ಅಂತಿಮಗೊಳ್ಳುವ ಸಾಧ್ಯತೆ ಇದೆ.
'ನಾನು ನನ್ನ ಅಭಿಪ್ರಾಯಗಳನ್ನು ತಿಳಿಸಿದ್ದೇನೆ. ಭಾನುವಾರದೊಳಗೆ ಅಂತಿಮ ನಿರ್ಧಾರ ಹೊರಬೀಳಲಿದೆ' ಎಂದು ವಟ್ಟಿಯೂರ್ಕಾವ್ ಕ್ಷೇತ್ರದಿಂದ ಜಯಿಸಿರುವ ಕಾಂಗ್ರೆಸ್ನ ಹಿರಿಯ ನಾಯಕ ಕೆ. ಮುರಳೀಧರ್ ಹೇಳಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಯುಡಿಎಫ್ ಪ್ರಚಂಡ ಗೆಲುವು ದಾಖಲಿಸಿತ್ತು. ಕಾಂಗ್ರೆಸ್ 63 ಶಾಸಕರೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಕಾಂಗ್ರೆಸ್ನ ಶಾಸಕರು ನೂತನ ಸಿಎಂ ಆಯ್ಕೆ ಸಂಬಂಧ ತಮ್ಮ ಅಭಿಪ್ರಾಯಗಳನ್ನು ಎಐಸಿಸಿ ವೀಕ್ಷಕರಿಗೆ ಮಂಡಿಸಿದ್ದಾರೆ.
ಕೇರಳ CM ಸ್ಥಾನಕ್ಕಾಗಿ ಸತೀಶನ್, ವೇಣುಗೋಪಾಲ್, ಚೆನ್ನಿತ್ತಲ ನಡುವೆ ತೀವ್ರ ಪೈಪೋಟಿಕೇರಳಂ ಫಲಿತಾಂಶ: ಬಿಜೆಪಿ ಗಮನಾರ್ಹ ಸಾಧನೆ, 3ರಲ್ಲಿ ಗೆಲುವು, 6 ಕಡೆ ಎರಡನೇ ಸ್ಥಾನ
ಇದಕ್ಕೂ ಮೊದಲು ನಡೆದ ಸಿಎಲ್ಪಿ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯನ್ನು ನಿರ್ಧರಿಸಲು ಪಕ್ಷದ ಹೈಕಮಾಂಡ್ಗೆ ಅಧಿಕಾರ ನೀಡುವ ನಿರ್ಣಯವನ್ನು ಅಂಗೀಕರಿಸಲಾಯಿತು. ಇದೀಗ ವೀಕ್ಷಕರು ಹೈಕಮಾಂಡ್ಗೆ ವರದಿಯನ್ನು ಸಲ್ಲಿಸಲಿದ್ದಾರೆ. ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.
ನೂತನ ಸಿಎಂ ಆಯ್ಕೆಯಲ್ಲಿ ಶಾಸಕರ ಬೆಂಬಲ ನಿರ್ಣಾಯಕವೆನಿಸಲಿದೆ. ಸಂಸದ ಕೆ. ಸುಧಾರಕರನ್ ಸಹ ಇದೇ ಅಭಿಪ್ರಾಯಯವನ್ನು ವ್ಯಕ್ತಪಡಿಸಿದ್ದಾರೆ.
'ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಬೇಕು. ಅವರ ಭಾವನೆಗಳನ್ನು ಪರಿಗಣಿಸಬೇಕು' ಎಂದಿದ್ದಾರೆ.
ಸಿಎಂ ಗಾದಿಯಲ್ಲಿ ಮುಂಚೂಣಿಯಲ್ಲಿರುವ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮತ್ತು ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಿದ್ದ ವಿ.ಡಿ. ಸತೀಶಶ್ ತಮ್ಮ ಅಭಿಪ್ರಾಯಗಳನ್ನು ವೀಕ್ಷಕರ ಮುಂದೆ ಮಂಡಿಸಿದ್ದಾರೆ. ಆದರೆ ವೀಕ್ಷಕರ ಭೇಟಿಯ ಬಳಿಕ ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ವೇಣುಗೋಪಾಲ್ಗೆ ಬಹುತೇಕ ಶಾಸಕರ ಬೆಂಬಲ...
ವಿಧಾನಸಭೆಯಲ್ಲಿ ಸ್ಪರ್ಧಿಸದಿದ್ದರೂ ಸಂಸದ ಕೆ.ಸಿ. ವೇಣುಗೋಪಾಲ್ ಅವರಿಗೆ ಬಹುತೇಕ ಶಾಸಕರು ಬೆಂಬಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ವಿ.ಡಿ.ಸತೀಶನ್, ಕೆ.ಸಿ. ವೇಣುಗೋಪಾಲ್ ಮತ್ತು ರಮೇಶ್ ಚೆನ್ನಿತ್ತಲ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕುತೂಹಲಕಾರಿ ಅಂಶ ಎಂದರೆ ಇವರು ಮೂವರೂ ನಾಯರ್ ಸಮುದಾಯಕ್ಕೆ ಸೇರಿದವರಾಗಿದ್ದು, ಕಾಂಗ್ರೆಸ್ ಮುಖಂಡ ಮಾಜಿ ಮುಖ್ಯಮಂತ್ರಿ, ದಿವಂಗತ ಕುರಣಾಕರನ್ ಅವರ ಶಿಷ್ಯರಾಗಿದ್ದಾರೆ.

