ತಿರುವನಂತಪುರ: ಕೇರಳಂನಲ್ಲಿ ಕೊಲ್ಲಂ ಜಿಲ್ಲೆಯ ನೂತನವಾಗಿ ಆಯ್ಕೆಯಾಗಿರುವ ಶಾಸಕಿ ಬಿಂದು ಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಚೆರಿಯನ್ ಫಿಲಿಪ್ ಬಲವಂತವಾಗಿ ತಬ್ಬಿಕೊಳ್ಳಲು ಯತ್ನಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಕೇರಳ ಚುನಾವಣಾ ಫಲಿತಾಂಶದ ಬಳಿಕ ಗುರುವಾರ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಶಾಸಕಾಂಗ ಪಕ್ಷದ ನಿರ್ಣಾಯಕ ಸಭೆಯ ವೇಳೆ ಈ ಘಟನೆ ನಡೆದಿದೆ.
ಪಕ್ಷದ ಮುಖಂಡರು ಹಾಗೂ ಮಾಧ್ಯಮ ಸಿಬ್ಬಂದಿಯ ಸಮ್ಮುಖದಲ್ಲೇ ಈ ಘಟನೆ ನಡೆದಿದೆ.
ಬಿಂದು ಕೃಷ್ಣ ಅವರು ಕಚೇರಿಯತ್ತ ಆಗಮಿಸಿದಾಗ ನಾಯಕರಿಗೆ ಕೈಮುಗಿಯುತ್ತಾ ಮುಂದೆ ಸಾಗುತ್ತಾರೆ. ಈ ವೇಳೆ ಚೆರಿಯನ್ ಆಲಿಂಗನ ಮಾಡಲು ಯತ್ನಿಸಿದ್ದಾರೆ. ಬಿಂದು ಕೃಷ್ಣ ನಿರಾಕರಿಸಿದಾಗಲೂ ಚೆರಿಯನ್ ಬಲವಂತ ಮಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಚೆರಿಯನ್ ವರ್ತನೆಗೆ ಬಾರಿ ಟೀಕೆ ವ್ಯಕ್ತವಾಗುತ್ತಿದೆ. ಆದರೆ ನಾಯಕರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಕೊಲ್ಲಂ ವಿಧಾನಸಭೆ ಕ್ಷೇತ್ರದಲ್ಲಿ ಬಿಂದು ಕೃಷ್ಣ ಅವರು 16 ಸಾವಿರಕ್ಕೂ ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ್ದರು.
ಕೇರಳಂನಲ್ಲಿ ನೂತನ ಸಿಎಂ ಆಯ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ನಿರ್ಣಾಯಕ ಸಭೆ ಗುರುವಾರ ಜರುಗಿತು. ಶಾಸಕರಿಂದ ಅಭಿಪ್ರಾಯ ಸಂಗ್ರಹಿಸಲಾಯಿತು.
ಸಿಎಂ ಸ್ಥಾನಕ್ಕಾಗಿ ವಿ.ಡಿ. ಸತೀಶನ್, ಕೆ.ಸಿ. ವೇಣುಗೋಪಾಲ್ ಹಾಗೂ ರಮೇಶ್ ಚೆನ್ನಿತ್ತಲ ನುಡವೆ ಪೈಪೋಟಿ ಏರ್ಪಟ್ಟಿದ್ದು, ಭಾನುವಾರದೊಳಗೆ ನೂತನ ಸಿಎಂ ಆಯ್ಕೆಯಾಗುವ ನಿರೀಕ್ಷೆ ಇದೆ.

