ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ (UDF) ಭರ್ಜರಿ ಜಯಗಳಿಸಿ ವಾರ ಕಳೆದರೂ ನಿಗೂಢವಾಗಿದ್ದ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಈಗ ಉತ್ತರ ಸಿಗುವ ಕಾಲ ಹತ್ತಿರ ಬಂದಿದೆ.
ದೆಹಲಿಯಲ್ಲಿ ನಡೆದ ಹೈಕಮಾಂಡ್ ಮತ್ತು ಕೇರಳದ ಹಿರಿಯ ನಾಯಕರ ಸುದೀರ್ಘ ಸಭೆಯ ನಂತರ, ಸಿಎಂ ಆಯ್ಕೆಯ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ.ದೆಹಲಿಯಲ್ಲಿ ಹೈವೋಲ್ಟೇಜ್ ಸಭೆ
ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ನಾಯಕರು, ಸಿಎಂ ಆಯ್ಕೆಯ ಕುರಿತು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದೇವೆ. ಆದಷ್ಟು ಶೀಘ್ರವೇ ಸಿಎಂ ಯಾರು ಅಂತಾ ಪ್ರಕಟಿಸಲಿದ್ದೇವೆ ಅಂತಾ ತಿಳಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಈ ಆಯ್ಕೆಗಾಗಿ ಮಾಜಿ ಕೆಪಿಸಿಸಿ ಅಧ್ಯಕ್ಷರಾದ ವಿ.ಎಂ. ಸುಧೀರನ್, ಮುಲ್ಲಪಳ್ಳಿ ರಾಮಚಂದ್ರನ್, ಕೆ. ಮುರಳೀಧರನ್ ಸೇರಿದಂತೆ ಹಲವು ಹಿರಿಯ ನಾಯಕರನ್ನು ದೆಹಲಿಗೆ ಆಹ್ವಾನಿಸಿ ಅಭಿಪ್ರಾಯ ಸಂಗ್ರಹಿಸಿದೆ.
ರೇಸ್ನಲ್ಲಿ ವೇಣುಗೋಪಾಲ್ ಮುಂಚೂಣಿ
ಕೇರಳದ ಸಿಎಂ ಸ್ಥಾನಕ್ಕೆ ಕೆ.ಸಿ. ವೇಣುಗೋಪಾಲ್, ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಅವರ ಹೆಸರುಗಳು ಕೇಳಿಬರುತ್ತಿವೆ. ಆದರೆ, ಸಭೆಯಲ್ಲಿ ಹೆಚ್ಚಿನ ನಾಯಕರು ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಪರವಾಗಿ ಒಲವು ತೋರಿದ್ದಾರೆ ಎನ್ನಲಾಗಿದೆ. ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವೇಣುಗೋಪಾಲ್ ಅವರನ್ನು ದೆಹಲಿಯಿಂದ ಕೇರಳಕ್ಕೆ ಮರಳಿ ಕಳುಹಿಸುವ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
ಮೈತ್ರಿ ಪಕ್ಷಗಳ ಪಾತ್ರವೇನು?
ಸಿಎಂ ಆಯ್ಕೆಯಲ್ಲಿ ಮೈತ್ರಿಕೂಟದ ಇತರ ಪಾಲುದಾರ ಪಕ್ಷಗಳ ಅಭಿಪ್ರಾಯ ಪಡೆಯಬೇಕೇ
ಬೇಡವೇ ಎಂಬ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ಭಿನ್ನಾಭಿಪ್ರಾಯ ಮೂಡಿದೆ. 140 ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಹತ್ತು ವರ್ಷಗಳ ಎಡರಂಗದ ಆಡಳಿತಕ್ಕೆ ಯುಡಿಎಫ್ ಅಂತ್ಯ ಹಾಡಿದ್ದು, ಈಗ ಹೊಸ ನಾಯಕತ್ವದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

