ಮಧೂರು: ಮಿತ್ರ ಎನ್ನುವ ಶಬ್ದಕ್ಕೆ ಸೂರ್ಯ ಎನ್ನುವ ಅರ್ಥವೂ ಇದೆ. ಸೂರ್ಯ ಎಲ್ಲವನ್ನೂ ಬೆಳಗಿಸುತ್ತಾನೆ. ಅದೇ ರೀತಿ ಮಿತ್ರಕಲಾವೃಂದವು ಐಕ್ಯಮತ್ಯದಿಂದ ಸರ್ವಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಮಧೂರು ಪರಿಸರವನ್ನು ಬೆಳಗಿಸಿದೆ. ಈ ಸಂಘದ ಐದು ದಶಕಗಳ ಸಾಧನೆ ಸ್ತುತ್ಯರ್ಹವಾದುದು ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಭಿಪ್ರಾಯಪಟ್ಟರು.
ಮಧೂರು ಮಿತ್ರಕಲಾವೃಂದದ ಸುವರ್ಣ ಮಹೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಧೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ 'ಮಿತ್ರ ರಂಗಮಂಟಪ'ದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಧ್ಯಕ್ಷ ಚಂದ್ರಗೋಪಾಲ ಎನ್. ಸ್ವಾಗತಿಸಿದರು. ಕಾರ್ಯದರ್ಶಿ ಮಧುಕರ ಕೆ. ಗಟ್ಟಿ ವರದಿ ವಾಚಿಸಿದರು. ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ವಿನೋದ್ ಕುಮಾರ್ ಬಿ. ಅವರನ್ನು ಸನ್ಮಾನಿಸಲಾಯಿತು. ಸಾಹಿತಿ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿನಂದನ ಭಾಷಣ ಮಾಡಿದರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ ಕೆ. ಉಪಸ್ಥಿತರಿದ್ದರು.
ಮಧೂರು ಪಂಚಾಯತ್ ಜನಪ್ರತಿನಿಧಿಗಳಾದ ಯೋಗೀಶ್ ಎಂ. ಆರ್., ದಾಕ್ಷಾಯಿಣಿ, ಶಮೀಮ, ಮನೋವಿಜ್ಞಾನಿ ಡಾ. ನವೀನ್ ಎಲ್ಲಂಗಳ, ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ಪ್ರಭಾಶಂಕರ ಮಾಸ್ಟರ್, ಮಧೂರು ಪರಿಸರದ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳಾದ ಕಿಶೋರ್ ಆಸ್ತ್ರ, ಅವಿನಾಶ್, ಸತೀಶ್ ಶೇರಿಗಾರ, ಪುರುಷೋತ್ತಮ, ಅನಂತು ಅರವಿಂದ್, ಅಶ್ರಫ್ ಮಧೂರು, ಮಿತ್ರ ಮಹಿಳಾ ಸಮಿತಿ ಅಧ್ಯಕ್ಷೆ ಸರಿತಾ ಎಂ. ಶುಭ ಹಾರೈಸಿದರು. ಐದು ಬಡಕುಟುಂಬಗಳಿಗೆ ಧನಸಹಾಯ ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸುವರ್ಣ ಮಹೋತ್ಸವ ಸಮಿತಿ ಸಂಚಾಲಕ ಧನಂಜಯ ಪಿ. ವಿ. ವಂದಿಸಿದರು. ಸಂಘದ ಕೋಶಾಧಿಕಾರಿ ಸುಜಿತ್ ಕೆ. ಸಿ. ಮತ್ತು ಸದಸ್ಯ ಮಹೇಶ್ ಎಂ. ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಮಧೂರು ಪರಿಸರದ ಅಂಗನವಾಡಿ ಮಕ್ಕಳಿಂದ ಮತ್ತು ಸ್ಥಳೀಯ ಪ್ರತಿಭೆಗಳಿಂದ ನೃತ್ಯವೈವಿಧ್ಯ, ಮಿತ್ರಕಲಾವೃಂದದ ಸದಸ್ಯರು ಮತ್ತು ಅತಿಥಿ ಕಲಾವಿದರಿಂದ 'ದೇವೆರ್ ಮುನಿಂಡ' ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.



