ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಿರುಪತ್ತೂರ್ ವಿಧಾನಸಭಾ ಕ್ಷೇತ್ರದಿಂದ ಕೇವಲ ಒಂದು ಮತದಿಂದ ಗೆದ್ದಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಆರ್. ಶ್ರೀನಿವಾಸ ಸೇತುಪತಿ ಅವರು, ವಿಧಾನಸಭೆಯಲ್ಲಿ ವಿಶ್ವಾಸ ಮತ ಹಾಕುವುದಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ಏಪ್ರಿಲ್ 23ರಂದು ನಡೆದ ಮತದಾನದಲ್ಲಿ ಟಿವಿಕೆ ಶಾಸಕನ ವಿರುದ್ಧ ಸೋತ ಡಿಎಂಕೆ ಅಭ್ಯರ್ಥಿ ಕೆ.ಆರ್. ಪೆರಿಯಕರುಪ್ಪನ್ ಸಲ್ಲಿಸಿದ್ದ ಅರ್ಜಿ ಪರಿಗಣಿಸಿರುವ ನ್ಯಾಯಮೂರ್ತಿಗಳಾದ ಎಲ್. ವಿಕ್ಟೋರಿಯಾ ಗೌರಿ ಮತ್ತು ಎನ್. ಸೆಂಥಿಲ್ ಕುಮಾರ್ ಅವರನ್ನೊಳಗೊಂಡ ರಜಾಕಾಲದ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ.
17ನೇ ವಿಧಾನಸಭೆಯ ವೇಳೆ ಸದನದಲ್ಲಿ ಬಹುಮತ ಸಾಬೀತುಪಡಿಸುವ ಸಂದರ್ಭದಲ್ಲೂ ಶ್ರೀನಿವಾಸ ಸೇತುಪತಿ ಮತ ಹಾಕಲು ಸಾಧ್ಯವಿಲ್ಲ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದಿದ್ದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಳಿಕ ಕಾಂಗ್ರೆಸ್, ವಿಸಿಕೆ, ಐಯುಎಂಎಲ್, ಸಿಪಿಐ ಹಾಗೂ ಸಿಪಿಎಂ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರ ರಚಿಸಿತ್ತು.
ಮೇ 10ರಂದು ವಿಜಯ್, ತಮಿಳಿನಾಡಿನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈಗ ಬುಧವಾರದಂದು ಸದನದಲ್ಲಿ ಬಹುಮತ ಸಾಬೀತು ಮಾಡಬೇಕಿರುವ ಒತ್ತಡದಲ್ಲಿದ್ದಾರೆ.
ತಿರುಪತ್ತೂರ್ ಕ್ಷೇತ್ರದ ಮಾಜಿ ಶಾಸಕರಾಗಿರುವ ಪೆರಿಯಕರುಪ್ಪನ್, ಮರು ಮತ ಎಣಿಕೆ ನಡೆಸುವಂತೆ ಅರ್ಜಿಯಲ್ಲಿ ವಿನಂತಿಸಿದ್ದಾರೆ. ಅಲ್ಲದೆ ಶ್ರೀನಿವಾಸ ಸೇತುಪತಿ ಅವರ ಪ್ರಮಾಣವಚನಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ.
ಮೇ 4ರಂದು ಪ್ರಕಟಗೊಂಡ ಫಲಿತಾಂಶದಲ್ಲಿ ಸೇತುಪತಿ 83,365 ಮತಗಳನ್ನು ಗಳಿಸಿದ್ದರೆ ಪೆರಿಯಕರುಪ್ಪನ್ 83,364 ಮತಗಳನ್ನು ಪಡೆದಿದ್ದರು.

