ನವದೆಹಲಿ: ಇಂದು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ 62ನೇ ಪುಣ್ಯತಿಥಿ. ಇದೇ ಸಂದರ್ಭದಲ್ಲಿ ನೆಹರೂ ಅವರ ಇತಿಹಾಸವನ್ನು ತಿರುಚಲು, ನಿಂದಿಸಲು ಮತ್ತು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಧಾನಿ ನರೇಂದ್ರ ಮೋದಿ ಅವರು ದುರುದ್ದೇಶಪೂರಿತ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್, 'ಮೋದಿ ಸರ್ಕಾರವು ದೇಶದ ರಾಜಕೀಯ, ಸಮಾಜ ಮತ್ತು ಆರ್ಥಿಕತೆಗೆ ಮಾಡಿರುವ ಹಾನಿಯ ನೈಜ ಚಿತ್ರಣ ದಿನದಿಂದ ದಿನಕ್ಕೆ ಜಗಜ್ಜಾಹೀರಾಗುತ್ತಿದೆ. ಇಂದಿನ ದಿನಗಳಲ್ಲಿ ನೆಹರೂ ಅವರ ಪ್ರಸ್ತುತತೆ ಮತ್ತಷ್ಟು ಹೆಚ್ಚಾಗುತ್ತಿದೆ' ಎಂದು ಹೇಳಿದ್ದಾರೆ.
'ಜವಾಹರಲಾಲ್ ನೆಹರೂ ಅವರು ನಿಧನರಾಗಿ ಇಂದಿಗೆ 62 ವರ್ಷಗಳಾಗಿವೆ. ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ಮಹಾನ್ ಐತಿಹಾಸಿಕ ವ್ಯಕ್ತಿಗಳ ಜೀವನ, ಕೊಡುಗೆಗಳ ಬಗ್ಗೆ ವಿಶ್ಲೇಷಣೆ, ಟೀಕೆ ಮತ್ತು ಶ್ಲಾಘನೆಗಳು ವ್ಯಕ್ತವಾಗುವುದು ಸಹಜ. ಆದರೆ, ನೆಹರೂ ಅವರ ಐತಿಹಾಸಿಕ ಕೊಡುಗೆಗಳನ್ನು ನಿರಂತರವಾಗಿ ನಿರಾಕರಿಸುತ್ತಿರುವುದು ಮತ್ತು ಅವರನ್ನು ವ್ಯವಸ್ಥಿತವಾಗಿ ನಿಂದಿಸಲು ದ್ವೇಷದ ರಾಜಕಾರಣ ಮಾಡುತ್ತಿರುವುದು ವಿಕೃತ ಮನಸ್ಥಿತಿಯಾಗಿದೆ' ಎಂದು ರಮೇಶ್ ಅವರು ಅಸಮಾಧಾನ ಹೊರಹಾಕಿದ್ದಾರೆ.
ಹಾಗೆಯೇ ಆಧುನಿಕ ಭಾರತದ ಅಡಿಪಾಯದಿಂದ ನೆಹರೂ ಅವರ ಹೆಸರನ್ನು ಅಳಿಸಿಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷ ಪ್ರತಿಪಾದಿಸಿದೆ.
ಇನ್ನು, ಜವಾಹರಲಾಲ್ ನೆಹರೂ ಅವರ 62ನೇ ಪುಣ್ಯತಿಥಿ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 'ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ಆಗಸ್ಟ್ 15, 1947ರಿಂದ 1964ರ ಮೇ 27ರವರೆಗೆ ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ನೆಹರೂ ಸೇವೆ ಸಲ್ಲಿಸಿದ್ದರು. 1964ರ ಮೇ 27ರಂದು ತಮ್ಮ 74ನೇ ವಯಸ್ಸಿನಲ್ಲಿ ನಿಧನರಾದರು.

