ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ರೇಣುಕೈ ಕೆರಿಯರ್ ಸೆಂಟರ್ (RCC)ನ ಸಂಸ್ಥಾಪಕ ಶಿವರಾಜ್ ಮೊಟೇಗಾಂವ್ಕರ್ ಅವರ ಪುತ್ರ ಸೇರಿದಂತೆ ಮೂವರು ವಿದ್ಯಾರ್ಥಿಗಳಿಗೆ ರಸಾಯನಶಾಸ್ತ್ರದ ಪ್ರಶ್ನೆಗಳನ್ನು ಪಡೆಯಲು ಲಾತೂರ್ ಮೂಲದ ವೈದ್ಯ ಮನೋಜ್ ಶಿರೂರೆ ಸಹಾಯ ಮಾಡಿದ್ದರು. ನೀಟ್ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಪಿ.ವಿ. ಕುಲಕರ್ಣಿ ಅವರ ಮೂಲಕ ಈ ಪ್ರಶ್ನೆಗಳನ್ನು ಒದಗಿಸಿದ ಆರೋಪದ ಮೇಲೆ ಸಿಬಿಐ ಮನೋಜ್ ಶಿರೂರೆ ಅವರನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಲಾತೂರ್ ನಲ್ಲಿ RCC ತರಬೇತು ಕೇಂದ್ರ ನಡೆಸುತ್ತಿದ್ದ ಶಿವರಾಜ್ ಮೊಟೇಗಾಂವ್ಕರ್ ಅವರನ್ನು ಇತ್ತೀಚೆಗೆ ಸಿಬಿಐ ಬಂಧಿಸಿದೆ.
ಪುಣೆಯ ತರಬೇತು ಕೇಂದ್ರ ಡಾ. ಅಭಂಗ್ ಪ್ರಭು ಮೆಡಿಕಲ್ ಅಕಾಡೆಮಿ (ಎಪಿಎಂಎ)ಯ ಭೌತಶಾಸ್ತ್ರ ಶಿಕ್ಷಕ ತೇಜಸ್ ಹರ್ಷದ್ ಕುಮಾರ್ ಶಾ ಅವರನ್ನು ಕೂಡ ಸಿಬಿಐ ಬಂಧಿಸಿದೆ. ಶಾ ಅವರು ಸಹ ಆರೋಪಿ ಮನೀಷಾ ಹವಾಲ್ದಾರ್ ಅವರಿಂದ ನೀಟ್-ಯುಜಿ 2026ರ ಸೋರಿಕೆಯಾದ ಭೌತಶಾಸ್ತ್ರದ ಪ್ರಶ್ನೆಗಳನ್ನು ಪಡೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
''ಈ ಪ್ರಕರಣದ ಹಿಂದಿರುವ ಪಿತೂರಿ ಮತ್ತು ಜಾಲವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಸಿಬಿಐ ಇದುವರೆಗೆ 49 ಸ್ಥಳಗಳಲ್ಲಿ ಶೋಧ ನಡೆಸಿದ್ದು, ಆರೋಪಗಳನ್ನು ಸಾಬೀತುಪಡಿಸುವ ಹಲವು ದಾಖಲೆಗಳು, ಲ್ಯಾಪ್ಟಾಪ್ ಗಳು ಮತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದೆ'' ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳ ನಡುವೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇ 3ರಂದು ನಡೆಸಿದ್ದ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಯನ್ನು ರದ್ದುಗೊಳಿಸಿತ್ತು. ಮರು ಪರೀಕ್ಷೆಯನ್ನು ಜೂನ್ 21ರಂದು ನಡೆಸಲು ಅದು ನಿರ್ಧರಿಸಿದೆ.

