ಬದಿಯಡ್ಕ: ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯೋಪಾಧ್ಯಾಯ ಪ್ರಶಾಂತ್ ಕುಮಾರ್ ಕೆ. ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಡಯಟ್ ಮಾಯಿಪ್ಪಾಡಿಯ ಉಪನ್ಯಾಸಕ ಕುಮಾರ ಸುಬ್ರಹ್ಮಣ್ಯ ಯೋಗ ತರಬೇತಿಯನ್ನು ನೀಡಿದರು. ಅವರು ಮಾತನಾಡಿ ಭಾರತವು ಜಗತ್ತಿಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ ಯೋಗ. ಅಂತರರಾಷ್ಟ್ರೀಯ ಯೋಗ ದಿನಾಚರಣೆಯು ನಮಗೆ ಯೋಗದ ಮಹತ್ವವನ್ನು ನೆನಪಿಸುವ ದಿನವಾಗಿದೆ. ಇದನ್ನು ಕೇವಲ ವರ್ಷದ ಒಂದು ದಿನಕ್ಕೆ ಸೀಮಿತಗೊಳಿಸದೆ, ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿಸಿಕೊಂಡಾಗ ಮಾತ್ರ ಯೋಗ ದಿನಾಚರಣೆಯ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ. ಆಧುನಿಕ ಜಗತ್ತಿನ ಜಂಜಾಟ, ಒತ್ತಡ ಮತ್ತು ಬದಲಾದ ಜೀವನಶೈಲಿಯಿಂದಾಗಿ ಮನುಷ್ಯ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾನೆ. ಯೋಗವು ಕೇವಲ ದೈಹಿಕ ಕಸರತ್ತಲ್ಲ; ಅದು ದೇಹ ಮತ್ತು ಮನಸ್ಸನ್ನು ಜೋಡಿಸುವ ಕಲೆ. ನಿಯಮಿತ ಯೋಗಾಭ್ಯಾಸದಿಂದ ದೇಹದ ನಮ್ಯತೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರಕ್ತದೊತ್ತಡ ಮತ್ತು ಮಧುಮೇಹದಂತಹ ದೀರ್ಘಕಾಲದ ಕಾಯಿಲೆಗಳು ನಿಯಂತ್ರಣಕ್ಕೆ ಬರುತ್ತವೆ. ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆ ಕಡಿಮೆಯಾಗಿ, ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದರು.
ಶಾಲಾ ನೌಕರ ಸಂಘದ ಕಾರ್ಯದರ್ಶಿ ಸುಭಾಷ್ ಇ ಕೆ, ಎಸ್ ಆರ್ ಜಿ ಕನ್ವೀನರ್ ಶರತ್ ಕುಮಾರ್ ಶುಭ ಹಾರೈಸಿದರು. ಅಧ್ಯಾಪಕ ಅಬ್ದುಲ್ ಸಲಾಂ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅಖಿಲ ಲಕ್ಷ್ಮಿ ಸ್ವಾಗತಿಸಿ, ಹಿರಿಯ ಅಧ್ಯಾಪಿಕೆ ಜ್ಯೋತಿ ಕೆ ವಂದಿಸಿದರು.

.jpg)
