ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, 'ಮಹಾರಾಷ್ಟ್ರದಲ್ಲಿ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನಾ ಮಾತ್ರ ಇದೆ' ಎಂದು ಹೇಳಿದರು.
ಕೊಲ್ಲಾಪುರದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, 'ಈ ಹಿಂದೆ ನಾವು ಶಿವಸೇನಾ ಶಿಂದೆ ಬಣ ಎಂದು ಕರೆಯುತ್ತಿದ್ದೆವು.
ಈಗ ಯಾವುದೇ ಬಣವಿಲ್ಲ. ಕೇವಲ ಒಂದೇ ಶಿವಸೇನಾ ಇದೆ' ಎಂದು ಹೇಳಿದರು.
'ಭಾರತ ಧರ್ಮಶಾಲೆಯಲ್ಲ'
ಕಾಂಗ್ರೆಸ್ ಮತ್ತು ಅದರ ಮಡಿಲಲ್ಲಿ ಕುಳಿತಿರುವ ಉದ್ಧವ್ ಠಾಕ್ರೆ ಅವರು ನುಸುಳುಕೋರರನ್ನು ಮತಬ್ಯಾಂಕ್ ಆಗಿ ಪರಿವರ್ತಿಸಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ನಾನು ಅವರಿಗೆ ಸ್ಪಷ್ಟವಾಗಿ ಹೇಳುತ್ತೇನೆ ಭಾರತ ಧರ್ಮಶಾಲೆ ಅಲ್ಲ. ಈ ದೇಶಕ್ಕೆ ಸೇರಿದವರು ಮಾತ್ರ ಇಲ್ಲಿ ವಾಸಿಸಬಹುದು ಎಂದು ಅಮಿತ್ ಶಾ ಹೇಳಿದರು.
'ಎಲ್ಲ ನುಸುಳುಕೋರರನ್ನು ಪತ್ತೆ ಹಚ್ಚಿ, ಹೊರದಬ್ಬಲಾಗುವುದು' ಎಂದು ತಿಳಿಸಿದರು.
'ಕೈ' ಜತೆ ವಿಲೀನ ಆರೋಪ ನಿರಾಕರಿಸಿದ ಉದ್ಧವ್
ಶಿವಸೇನಾ(ಯುಬಿಟಿ) ಕಾಂಗ್ರೆಸ್ನೊಂದಿಗೆ ವಿಲೀನಗೊಳ್ಳುವ ಭಯವಿದೆ ಎಂದು ಆರು ಬಂಡಾಯ ಶಾಸಕರ ಆರೋಪವನ್ನು ನಿರಾಕರಿಸಿರುವ ಪಕ್ಷದ ನಾಯಕ ಉದ್ಧವ್ ಠಾಕ್ರೆ ಅವರು 'ಒಗ್ಗಟ್ಟಾಗಿರುವ ಸೇನೆಯು ಯಾವತ್ತಿಗೂ ಹಿಂದುತ್ವ ಮತ್ತು ಈ ಮಣ್ಣಿನ ಮಕ್ಕಳನ್ನು ಬೆಂಬಲಿಸುತ್ತದೆ' ಎಂದು ಹೇಳಿದರು.
ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿಗೆ ತಮ್ಮ ಪಕ್ಷದಲ್ಲಿ ಸಂಭವಿಸಬಹುದಾದ ವಿಭಜನೆ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಉದ್ಧವ್ ಅವರು 'ಶಿವಸೇನಾ ಯಾರೊಂದಿಗೂ ವಿಲೀನಗೊಳ್ಳಲು ರಚನೆಯಾಗಿಲ್ಲ' ಎಂದು ತಿಳಿಸಿದರು.
ಮೂಲ ಶಿವಸೇನಾದ 60ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು 'ಮರಾಠಿ ಜನರ ಹಕ್ಕುಗಳಿಗಾಗಿ ಹೋರಾಡಲು ಮತ್ತು ಹಿಂದುತ್ವದ ರಕ್ಷಣೆಗೆ ಶಿವಸೇನೆಯು ರಚನೆಯಾಗಿದೆ' ಎಂದು ಹೇಳಿದರು.
'ಮೂವತ್ತು ವರ್ಷ ಬಿಜೆಪಿಯೊಂದಿಗೆ ಮೈತ್ರಿಯಿದ್ದರೂ ಅದರೊಂದಿಗೆ ವಿಲೀನಗೊಳ್ಳದ ನಾವು ಕಾಂಗ್ರೆಸ್ನೊಂದಿಗೆ ವಿಲೀನಗೊಳ್ಳಲು ಹೇಗೆ ಸಾಧ್ಯ. ಮಹಾರಾಷ್ಟ್ರ ಬಿಜೆಪಿಯು ಶಿಂದೆ ಬಣದೊಂದಿಗೆ ವಿಲೀನಗೊಳ್ಳುವ ಭಯವಿದೆ. ಕಾಂಗ್ರೆಸ್ನೊಂದಿಗೆ ನಮಗೆ ಹಲವು ಭಿನ್ನಾಭಿಪ್ರಾಯಗಳಿವೆ. ಆದರೆ ಬಿಜೆಪಿಯ ರೀತಿ ಅದು ಶಿವಸೇನಾವನ್ನು ವಿಭಜಿಸಲು ಪ್ರಯತ್ನಿಸುವುದಿಲ್ಲ' ಎಂದು ಟೀಕಿಸಿದರು.

