ನವದೆಹಲಿ: ದೆಹಲಿಯಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ, ಅದು ತನ್ನ ನಿಗದಿತ ಮಾರ್ಗ ಬದಲಿಸಿ ಪಾಕಿಸ್ತಾನದ ವಾಯುಪ್ರದೇಶ ಪ್ರವೇಶಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏರ್ ಇಂಡಿಯಾದ AI-479 ವಿಮಾನ ದೆಹಲಿಯಿಂದ ಪಂಜಾಬ್ನ ಅಮೃತಸರಕ್ಕೆ ಹೋಗುವಾಗ ಈ ಘಟನೆ ನಡೆದಿದೆ.
ತಾಂತ್ರಿಕ ಕಾರಣಗಳಿಂದ ವಿಮಾನ ಭಾರತದ ಗಡಿ ದಾಟಿ ಸ್ವಲ್ಪ ಸಮಯದವರೆಗೆ ಪಾಕಿಸ್ತಾನದ ವಾಯುಪ್ರದೇಶದೊಳಗೆ ಸಂಚರಿಸಿತು ಎಂದು ವಿಮಾನಯಾನ ಇಲಾಖೆ ತಿಳಿಸಿದೆ.
ವಿಮಾನ ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆ ಎಚ್ಚೆತ್ತ ಪಾಕಿಸ್ತಾನದ ವಾಯು ಸಂಚಾರ ನಿಯಂತ್ರಣ (ಎಟಿಸಿ) ಸಂಸ್ಥೆ ತಕ್ಷಣವೇ ವಿಮಾನದ ಪೈಲಟ್ಗಳಿಗೆ ತುರ್ತು ಸೂಚನೆಗಳನ್ನು ನೀಡಿತು. ತದನಂತರ ಉಭಯ ದೇಶಗಳ ವಾಯು ಸಂಚಾರ ನಿಯಂತ್ರಣ ಸಂಸ್ಥೆಗಳ ನಡುವೆ ಸಮನ್ವಯ ಸಾಧಿಸಿದ ಪೈಲಟ್ಗಳು ಮಾತುಕತೆ ನಡೆಸಿ ಪಾಕಿಸ್ತಾನದ ಎಟಿಸಿ ಮಾರ್ಗದರ್ಶನದಂತೆ ವಿಮಾನದ ದಿಕ್ಕನ್ನು ಬದಲಿಸಿಕೊಂಡು ಭಾರತೀಯ ವಾಯುಪ್ರದೇಶಕ್ಕೆ ಹಿಂತಿರುಗಲಾಯಿತು. ಬಳಿಕ ವಿಮಾನ ದೆಹಲಿಯ ಕಡೆಗೆ ಮರಳಿತು ಎಂದು ವರದಿಗಳು ತಿಳಿಸಿವೆ.
ಆಪರೇಷನ್ ಸಿಂಧೂರದ ನಂತರ ಭಾರತದ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಸದ್ಯ ಎರಡು ದೇಶಗಳ ನಡುವೆ ರಾಜತಾಂತ್ರಿಕ ಉದ್ವಿಗ್ನತೆ ಇರುವ ಬೆನ್ನಲ್ಲೇ ವಿಮಾನದಲ್ಲಿನ ತಾಂತ್ರಿಕ ದೋಷದಿಂದ ಈ ಘಟನೆ ನಡೆದಿದೆ ಎಂದು ಏರ್ ಇಂಡಿಯಾ ಹೇಳಿದೆ.

