ಕಾಸರಗೋಡು: ಜಿಲ್ಲೆಯ ಕೇಂದ್ರ ನಗರವಾದ ಕಾಸರಗೋಡಿನಲ್ಲಿ ಕಾರ್ಯಾಚರಿಸುತ್ತಿರುವ ನಗರಸಭಾ ಕಚೇರಿ ಕಟ್ಟಡ ಜೀರ್ಣಗೊಂಡಿದ್ದು, ಸ್ಥಳ ಪರಿಮಿತಿಯಿಂದ ಸಂದಿಗ್ಧತೆಯನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನೂತನ ಕಟ್ಟಡ ನಿರ್ಮಿಸಬೇಕೆಂಬ ಬೇಡಿಕೆಯೊಂದಿಗೆ ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ಸಚಿವ ಕೆ.ಎಂ. ಶಾಜಿಯವರಿಗೆ ಮನವಿ ನೀಡಿದ್ದಾರೆ. ಮಳೆಗಾಲದಲ್ಲಿ ಕಟ್ಟಡದ ವಿವಿಧ ಭಾಗಗಳಲ್ಲಿ ನೀರು ಸೋರುತ್ತಿದ್ದು, ಜೀರ್ಣಗೊಂಡ ಕಟ್ಟಡದ ಅಸೌಕರ್ಯ ಕಚೇರಿ ಚಟುವಟಿಕೆಗಳಿಗೆ ಪ್ರತಿಕೂಲವಾಗುತ್ತಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. 1998 ನವೆಂಬರ್ ೨೫ರಂದು ದಿ| ಸಯ್ಯೀದ್ ಅಬ್ದುಲ್ ರಹಿಮಾನ್ ಬಾಫಕಿ ತಂಙಳ್ರ ಅಧ್ಯಕ್ಷತೆಯಲ್ಲಿ ಅಂದಿನ ಲೋಕೋಪಯೋಗಿ ಸಚಿವ ಟಿ.ಕೆ. ದಿವಾಕರನ್ ನಿರ್ಮಾಣ ಕಾಮಗಾರಿ ಉದ್ಘಾಟಿಸಿದ್ದರು.
1978 ಜೂನ್ 23ರಂದು ನಗರಸಭಾ ಮಾಜಿ ಅಧ್ಯಕ್ಷ, ಮಾಜಿ ಶಾಸಕನಾಗಿದ್ದ ಹಮೀದಲಿ ಚೆಮ್ನಾಡ್ರ ಅಧ್ಯಕ್ಷತೆಯಲ್ಲಿ ಅಂದಿನ ನಗರಸಭಾ ಅಧ್ಯಕ್ಷ ಎಂ. ರಾಮಣ್ಣ ರೈ ಉದ್ಘಾಟಿಸಿದ್ದರು. ಕಾಸರಗೋಡು ನಗರಸಭೆಯ ಇತಿಹಾಸದಲ್ಲಿ ಹಲವಾರು ಪ್ರಧಾನ ತೀರ್ಮಾನಗಳು, ಅಭಿವೃದ್ಧಿ ಚಟುವಟಿಕೆಗಳಿಗೆ ಸಾಕ್ಷಿಯಾಗಿರುವ ಈ ಕಟ್ಟಡ ಈಗ ದುರಸ್ತಿಯಿಂದ ಮಾತ್ರ ಉಳಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದೆ. ಹಲವು ಭಾಗಗಳಲ್ಲಿ ಕಾಂಕ್ರೀಟ್ ಕಿತ್ತು ಹೋಗಿ ಜನಪ್ರತಿನಿಧಿಗಳು, ನೌಕರರು, ಸಾರ್ವಜನಿಕರಿಗೆ ಸುರಕ್ಷಾಭೀತಿ ಒಡ್ಡುತ್ತಿದೆ. ಅಲ್ಲದೆ ಹಳೆಯ ಕಡತಗಳನ್ನು ತೆಗೆದಿರಿಸಲು ಅಗತ್ಯದ ಸೌಕರ್ಯವಿಲ್ಲದೆ ಅಲ್ಲಲ್ಲಿ ರಾಶಿ ಹಾಕಲಾಗುತ್ತಿದೆ. ವಿದ್ಯುತ್ ವಯರಿಂಗ್ ಕೂಡಾ ಕಾಲಹರಣಗೊಂಡು ಅಪಾಯ ಸಾಧ್ಯತೆ ಕಂಡು ಬರುತ್ತಿದೆ.
ದಿನಂಪ್ರತಿ ನೂರಾರು ಮಂದಿ ವಿವಿಧ ಅಗತ್ಯಗಳಿಗಾಗಿ ಈ ನಗರಸಭೆಗೆ ತಲುಪುತ್ತಿ ದ್ದಾರೆ. ಕೇರಳದ ಪ್ರಧಾನ ಫಸ್ಟ್ ಗ್ರೇಡ್ ನಗರಸಭೆಗಳಲ್ಲೊಂದಾದ ಕಾಸರಗೋಡು ನಗರಸಭೆಗೆ ಪ್ರಸ್ತುತ ಅಗತ್ಯಗಳಿಗನುಸಾರವಾಗಿ ರುವ ಆಧುನಿಕ ಸೌಕರ್ಯಗಳೊಂದಿಗಿನ ಹೊಸ ಕಚೇರಿ ಸಮುಚ್ಛಯ ಅನಿವಾರ್ಯ ವಾಗಿದೆ. ಕಚೇರಿ ಕಟ್ಟಡ ನವೀಕರಿಸುವುದಕ್ಕಾಗಿ ಕಳೆದ ಸರಕಾರ ಬಜೆಟ್ನಲ್ಲಿ 3 ಕೋಟಿ ರೂ. ಮೀಸಲಿಟ್ಟಿದೆಯಾದರೂ ಯಾವುದೇ ಕ್ರಮ ಉಂಟಾಗಿರಲಿಲ್ಲ. ಆದುದರಿಂದ ಯೋಜನೆಯ ಕ್ರಮಗಳನ್ನು ತುರ್ತಾಗಿ ಜ್ಯಾರಿಗೊಳಿಸುವುದು, ಹೊಸ ಮುಂಗಡಪತ್ರದಲ್ಲಿ ಅಗತ್ಯದ 7 ಕೋಟಿ ರೂ. ಮಂಜೂರು ಮಾಡುವುದು, ನಗರಸಭೆಗೆ ಆಧುನಿಕ ರೀತಿಯ ಹೊಸ ಕಚೇರಿ ಕಟ್ಟಡ ನಿರ್ಮಿಸುವುದು ಎಂಬ ಬೇಡಿಕೆಯೊಂದಿಗೆ ಸ್ಥಳೀಯಾಡಳಿತ ಸಚಿವ ಕೆ.ಎಂ. ಶಾಜಿಯವರಿಗೆ ಕಾಸರಗೋಡು ನಗರಸಭಾಧ್ಯಕ್ಷೆ ಮನವಿ ನೀಡಿದ್ದಾರೆ.

