ಲೇಹ್: ಲೇಹ್ ಅಪೆಕ್ಸ್ ಬಾಡಿ (ಎಲ್ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಕರೆ ನೀಡಿದ್ದ ಬಂದ್ನಿಂದಾಗಿ ಮಂಗಳವಾರ ಲಡಾಖ್ನಾದ್ಯಂತ ಸಾಮಾನ್ಯ ಜನಜೀವನ ಸ್ತಬ್ದವಾಗಿತ್ತು.
ರಸ್ತೆಗಿಳಿದ ಪ್ರತಿಭಟನಕಾರರು ಕೇಂದ್ರ ಸರಕಾರದೊಂದಿಗೆ 'ವಿಶ್ವಾಸಾರ್ಹ ಮಾತುಕತೆ' ನಡೆಸುವಂತೆ ಆಗ್ರಹಿಸಿದರು.
ಮೇ 22ರಂದು ನಡೆದ ಮಾತುಕತೆಯ ಪ್ರಮುಖ ಒಪ್ಪಂದಗಳನ್ನು ಸಭೆಯ ಅಧಿಕೃತ ನಡಾವಳಿಗಳಲ್ಲಿ ಸೇರಿಸಲು ವಿಫಲವಾಗುವ ಮೂಲಕ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಎರಡೂ ಗುಂಪುಗಳು ಆರೋಪಿಸಿವೆ.
ಸ್ಥಳೀಯ ಜನರೊಂದಿಗೆ ಸಮಾಲೋಚನೆ ನಡೆಸದೆ ಮದ್ಯ ನೀತಿ, ಭೂಮಿ, ವಿದ್ಯುತ್, ಸಾರಿಗೆ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿ, ಅವರು ಲೆಫ್ಟಿನೆಂಟ್ ಗವರ್ನರ್ ನೇತೃತ್ವದ ಆಡಳಿತವನ್ನು ಟೀಕಿಸಿದ್ದಾರೆ.
ಎಲ್ಎಬಿ ಮತ್ತು ಕೆಡಿಎ ಜಂಟಿಯಾಗಿ ಲಡಾಖ್ಗೆ ರಾಜ್ಯ ಸ್ಥಾನಮಾನ ನೀಡುವಂತೆ ಹಾಗೂ ಸಂವಿಧಾನದ ಆರನೇ ಪರಿಚ್ಛೇದದ ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಈ ಅಭಿಯಾನ ನಡೆಸುತ್ತಿವೆ.
ಈ ಗುಂಪುಗಳು 2021ರಿಂದ ಸರಕಾರದೊಂದಿಗೆ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿವೆ.
ಬಂದ್ಗೆ ಬೆಂಬಲ ವ್ಯಕ್ತಪಡಿಸಿ ಲೇಹ್ ಮತ್ತು ಕಾರ್ಗಿಲ್ ಸೇರಿದಂತೆ ಕೇಂದ್ರಾಡಳಿತ ಪ್ರದೇಶದ ಬಹುತೇಕ ಭಾಗಗಳಲ್ಲಿ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ಮುಚ್ಚಿದ್ದವು.
ಆದರೆ, ಪ್ರಸ್ತುತ ಪ್ರವಾಸೋದ್ಯಮದ ಕಾಲವಾಗಿರುವುದರಿಂದ ಮುಷ್ಕರದಿಂದ ವಿನಾಯಿತಿ ಪಡೆದಿದ್ದ ಸಾರಿಗೆ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಎಲ್ಎಬಿ ಮತ್ತು ಕೆಡಿಎ ಕಾರ್ಯಕರ್ತರು ಲೇಹ್ ಮತ್ತು ಕಾರ್ಗಿಲ್ನಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ತಮ್ಮ ಬೇಡಿಕೆಗಳನ್ನು ಪುನರುಚ್ಚರಿಸಿದರು.
ಎಲ್ಎಬಿ ಉಪಾಧ್ಯಕ್ಷ ಚೆರಿಂಗ್ ದೋರ್ಜೆ ಅವರ ಪ್ರಕಾರ, ಮೇ 22ರ ಮಾತುಕತೆಯಲ್ಲಿ ಲಡಾಖ್ನ ಮುಖ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲ ಅಧಿಕಾರಿಗಳು ಇನ್ನು ಮುಂದೆ ಕೇಂದ್ರದ ನಿಯಂತ್ರಣದಲ್ಲಿ ಇರುವಂತಿಲ್ಲ; ಬದಲಿಗೆ ಲಡಾಖ್ನ ಜನರಿಂದ ಆಯ್ಕೆಯಾದ ಸ್ಥಳೀಯ ಆಡಳಿತದ ಅಡಿಯಲ್ಲಿ ಕೆಲಸ ಮಾಡಬೇಕು ಎಂದು ಒಪ್ಪಿಕೊಳ್ಳಲಾಗಿತ್ತು.
ಆದರೆ, ಅನಂತರ ಬಿಡುಗಡೆಯಾದ ಸಭೆಯ ಅಧಿಕೃತ ನಡಾವಳಿಗಳಲ್ಲಿ ಇಂತಹ ಒಪ್ಪಂದಗಳು ಇರಲಿಲ್ಲ ಎಂದು ಸಂಘಟನೆಗಳು ಪ್ರತಿಪಾದಿಸಿವೆ.

