ನವದೆಹಲಿ: ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಸಸ್ಯಾಹಾರವನ್ನು ಹೇರಿಕೆ ಮಾಡುತ್ತಿದೆ ಎಂದು ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕ ಡೆರೆಕ್ ಒಬ್ರಯಾನ್ ಆರೋಪಿಸಿದ್ದಾರೆ.
ಜೂನ್ 22ರಂದು ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರವು ನೂತನ ಬಜೆಟ್ ಮಂಡನೆ ಮಾಡಿತು.
ಈ ವೇಳೆ ಮಾತನಾಡಿದ ಹಣಕಾಸು ಸಚಿವ ಸ್ವಪನ್ ದಾಸ್ಗುಪ್ತಾ ಅವರು, 'ಮಧ್ಯಾಹ್ನದ ಬಿಸಿ ಊಟದ ಯೋಜನೆಯ ಅಡಿಯಲ್ಲಿ ಸರ್ಕಾರಿ ಶಾಲೆಗಳಿಗೆ ಇಸ್ಕಾನ್, ಆಹಾರ ಸರಬರಾಜು ಮಾಡಲಿದೆ.' ಎಂದು ಹೇಳಿದ್ದರು.
ಕೆಲವು ವರದಿಗಳ ಪ್ರಕಾರ, ಇಸ್ಕಾನ್ ತಯಾರಿಸಿರುವ ಹೊಸ ಮೆನುವಿನಲ್ಲಿ ಮೊಟ್ಟೆಯ ಬದಲು ಪ್ರೋಟಿನ್ಯುಕ್ತ ಸಸ್ಯಾಹಾರವನ್ನು ನೀಡಲು ಉದ್ದೇಶಿಸಿದೆ. ಅದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಡೆರೆಕ್ ಒಬ್ರಯಾನ್, 'ನೂತನ ಸರ್ಕಾರವು ಮಕ್ಕಳನ್ನು ಪೋಷಣೆಯಿಂದ ವಂಚಿತರನ್ನಾಗಿಸುವುತ್ತಿದೆ ಹಾಗೂ ರಾಜ್ಯದಲ್ಲಿ ಬಲವಂತದಿಂದ ಸಸ್ಯಾಹಾರವನ್ನು ಹೇರಿಕೆ ಮಾಡುತ್ತಿದೆ. ಮೊಟ್ಟೆಯನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.
'ಚುನಾವಣೆಯ ಪ್ರಚಾರದ ವೇಳೆ ಮೀನು ತಿನ್ನುವ ಕುರಿತು ನಾಟಕ ಮಾಡಲಾಯಿತು. ಇದೀಗ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಗುಜರಾತಿ ನಾಯಕರ ಮುಖವಾಡ ಕಳಚಿಬಿದ್ದಿದೆ' ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.

