ನವದೆಹಲಿ: ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಸಂಭವಿಸಿದ ಸಾವು ನೋವಿನ ವಿಷಯದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಸದನವನ್ನು ದಾರಿ ತಪ್ಪಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಕೆ.ಸಿ. ವೇಣುಗೋಪಾಲ್ ಮಂಗಳವಾರ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದಾರೆ.
ಸಾರ್ವಜನಿಕ ಲೆಕ್ಕ ಸಮಿತಿಯ ಅಧ್ಯಕ್ಷರೂ ಆಗಿರುವ ವೇಣುಗೋಪಾಲ್, ಈ ಬಗ್ಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದಾರೆ.
ಕಳೆದ ವರ್ಷ ಜುಲೈ 28ರಂದು ಲೋಕಸಭೆಯಲ್ಲಿ ಮಾತನಾಡುವಾಗ, ಆಪರೇಷನ್ ಸಿಂಧೂರದಲ್ಲಿ ಸೈನಿಕರು ಮೃತಪಟ್ಟಿಲ್ಲ ಎಂದು ಹೇಳಿದ್ದರು; ಆದರೆ ಇತ್ತೀಚೆಗೆ ನೀಡಿದ ಹೇಳಿಕೆಯಲ್ಲಿ ಆರು ಮಂದಿ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ಆಪರೇಷನ್ ಸಿಂಧೂರದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ರಕ್ಷಣಾ ಸಚಿವರು ಸಂಸತ್ನಲ್ಲಿ ದಾರಿತಪ್ಪಿಸುವ ಹಾಗೂ ತಪ್ಪು ಹೇಳಿಕೆ ನೀಡಿದ್ದಾರೆ. ಸಚಿವರೊಬ್ಬರು ಸದನದ ಕಲಾಪದ ವೇಳೆ ಸದನವನ್ನು ದಾರಿ ತಪ್ಪಿಸುವುದು ಅಥವಾ ಸದನದಿಂದ ಮಾಹಿತಿಯನ್ನು ಮುಚ್ಚಿಡುವುದು ಹಕ್ಕುಚ್ಯುತಿ ಮತ್ತು ಸದನ ನಿಂದನೆಯಾಗುತ್ತದೆ' ಎಂದು ಹೇಳಿರುವ ಅವರು ಸಿಂಗ್ ವಿರುದ್ಧ ಹಕ್ಕುಚ್ಯುತಿ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಕೋರಿದ್ದಾರೆ.
ಆಪರೇಷನ್ ಸಿಂಧೂರ ಕುರಿತು ತಪ್ಪು ಮಾಹಿತಿ: ರಾಜನಾಥ ರಾಜೀನಾಮೆಗೆ ಹರಿಪ್ರಸಾದ್ ಆಗ್ರಹ
ಪತ್ರವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಅವರು, ಈ ಆರು ಮಂದಿ ಹುತಾತ್ಮರ ಕುಟುಂಬಗಳಿಗೆ ಮತ್ತು ಇಡೀ ಸಶಸ್ತ್ರ ಪಡೆಗಳಿಗೆ ಮಾಡಿದ ಘೋರ ಅಪಮಾನ ಇದು. ಭಾರತದ ಜನತೆಗೆ ಅವರ ಶೌರ್ಯ ಮತ್ತು ಬಲಿದಾನದ ಬಗ್ಗೆ ತಿಳಿಸಲಾಗಿಲ್ಲ ಎಂದು ಹೇಳಿದ್ದಾರೆ.
'ನಮ್ಮ ಶತ್ರುಗಳ ವಿರುದ್ಧ ದೇಶವನ್ನು ರಕ್ಷಿಸುವಾಗ, ನಮ್ಮ ರಾಷ್ಟ್ರದ ಸೇವೆಗಾಗಿ ಅವರು ಪ್ರಾಣತ್ಯಾಗ ಮಾಡಿದರು. ಆದರೆ, ರಾಷ್ಟ್ರೀಯತಾವಾದಿ ಎಂದು ಕರೆಸಿಕೊಳ್ಳುವ ಸರ್ಕಾರವು ಅವರ ಅರ್ಪಣೆ ಬಗ್ಗೆ ಸುಳ್ಳು ಹೇಳಿದೆ' ಎಂದು ಅವರು ಕಿಡಿಕಾರಿದ್ದಾರೆ.
ಕಳೆದ ವರ್ಷ ನಡೆದ ಆಪರೇಷನ್ ಸಿಂಧೂರ ವೇಳೆ ಕರ್ತವ್ಯದ ಅವಧಿಯಲ್ಲಿ ಮಡಿದ ಆರು ಮಂದಿ ಸೇನಾ ಸಿಬ್ಬಂದಿಯ (ಭೂಸೇನೆಯ ಐವರು ವಾಯುಪಡೆಯ ಒಬ್ಬರು) ಹೆಸರುಗಳನ್ನು ಇತ್ತೀಚೆಗೆ ರಾಷ್ಟ್ರೀಯ ಯುದ್ಧ ಸ್ಮಾರಕದ ಗೋಡೆಯ ಮೇಲೆ ಕೆತ್ತಲಾಗಿದೆ. ಆಪರೇಷನ್ ಸಿಂಧೂರ ವೇಳೆ ಮೃತಪಟ್ಟವರ ಹೆಸರುಗಳನ್ನು ಸರ್ಕಾರ ಬಿಡುಗಡೆ ಮಾಡಿರುವುದು ಇದೇ ಮೊದಲು.

