ಶ್ರೀನಗರ: ಸ್ಥಳಾಂತರಗೊಂಡಿರುವ ಕಾಶ್ಮೀರಿ ಪಂಡಿತರು ಮತ್ತೆ ಕಾಶ್ಮೀರ ಕಣಿವೆಗೆ ಮರಳಲು ಹಾಗೂ ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪನೆಯಾಗಲು ಸರ್ಕಾರಕ್ಕಿಂತ ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರ ಪಾತ್ರವೇ ದೊಡ್ಡದಾಗಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬುಧವಾರ ಹೇಳಿದ್ದಾರೆ.
ಅನಂತನಾಗ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಕಾಶ್ಮೀರ ಕಣಿವೆಯಲ್ಲಿ ಶಾಂತಿ ಮರುಸ್ಥಾಪನೆಯಾಗಲು ಸರ್ಕಾರಕ್ಕಿಂತ ಕಾಶ್ಮೀರಿ ಪಂಡಿತರು ಹಾಗೂ ಮುಸ್ಲಿಂ ಸಹೋದರರ ಪಾತ್ರ ಹೆಚ್ಚಾಗಿದೆ. ನಾವು ಒಂದೇ ಆಗಿದ್ದು, ನಾವು ಬೇರೆಯಲ್ಲ. ಭೂತಕಾಲದತ್ತ ನೋಡಬೇಡಿ, ಭವಿಷ್ಯದತ್ತ ನೋಡಿ ಎಂದು ನನ್ನ ಕಾಶ್ಮೀರಿ ಪಂಡಿತ ಸಹೋದರರಲ್ಲಿ ಮನವಿ ಮಾಡಿಕೊಳ್ಳುತ್ತೇನೆ' ಎಂದು ಹೇಳಿದರು.
ಇದಕ್ಕೂ ಮುನ್ನ, ದಕ್ಷಿಣ ಕಾಶ್ಮೀರ ಜಿಲ್ಲೆಯ ವೆರಿನಾಗ್ ಪ್ರದೇಶದ ತಮ್ಮ ಪೂರ್ವಜರ ಗ್ರಾಮವಾದ ಒಮೂಹ್ಮನಲ್ಲಿ ಕಾಶ್ಮೀರಿ ಪಂಡಿತರು ಆಯೋಜಿಸಿದ್ದ 'ಮೇಖಲ್' ಕಾರ್ಯಕ್ರಮದಲ್ಲಿ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಮೆಹಬೂಬಾ ಮುಫ್ತಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಯು. ಕೌಲ್, ಶುಶೀಲ್ ರಾಝ್ದಾನ್ ಹಾಗೂ ಸಮೀರ್ ಕೌಲ್ ಅವರಂತಹ ಗೌರವಾನ್ವಿತ ಕಾಶ್ಮೀರಿ ಪಂಡಿತ ವೈದ್ಯರ ಉದಾಹರಣೆ ನೀಡಿದ ಅವರು, 'ನೀವು ಕಾಶ್ಮೀರಕ್ಕೆ ಬಂದು ಇಲ್ಲಿನ ರೋಗಿಗಳಿಗೆ ಚಿಕಿತ್ಸೆ ನೀಡಿದರೆ, ಕಾಶ್ಮೀರದ ಜನರು ಚಿಕಿತ್ಸೆಗಾಗಿ ಕಣಿವೆಯಿಂದ ಹೊರಗೆ ಹೋಗಬೇಕಾದ ಅಗತ್ಯ ಇರುವುದಿಲ್ಲ' ಎಂದು ಹೇಳಿದರು.
'ದೇಶದ ಯಾವುದೇ ಭಾಗದಲ್ಲಿ ಕಾಶ್ಮೀರಿ ಪಂಡಿತ ವೈದ್ಯರನ್ನು ಕಾಶ್ಮೀರಿ ಮುಸ್ಲಿಮರು ಕಂಡರೆ, ಅವರನ್ನು ಹೃದಯಪೂರ್ವಕವಾಗಿ ಆಲಂಗಿಸಿಕೊಳ್ಳುತ್ತಾರೆ. ಕಾಶ್ಮೀರಿ ಮುಸ್ಲಿಮರ ಬಗ್ಗೆ ಕಾಶ್ಮೀರಿ ಪಂಡಿತ ವೈದ್ಯರಿಗೆ ಕೆಲವು ದೂರುಗಳಿದ್ದರೂ, ನಾನು ನಿಮಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಮುಸ್ಲಿಂ ರೋಗಿಗಳಿಗೆ ಅವರು ಹೇಳುವುದಿಲ್ಲ' ಎಂದು ಅವರು ಪ್ರಶಂಸಿಸಿದರು.
'ಯುವಕರು ಅಥವಾ ಯುವ ಕಾಶ್ಮೀರಿ ಪಂಡಿತ ವೈದ್ಯರು ಹಾಗೂ ಇತರ ವೃತ್ತಿಪರರು ಇಲ್ಲಿಗೆ ಬರಬೇಕು ಎಂಬುದು ನನ್ನ ಭಾವನೆಯಾಗಿದೆ. ನಾವು ಭೂತಕಾಲವನ್ನು ಮರೆತು, ಭವಿಷ್ಯದತ್ತ ನೋಡಬೇಕಿದೆ' ಎಂದು ಅವರು ಕರೆ ನೀಡಿದರು.
ಕಾಶ್ಮೀರ ಕಣಿವೆಯಲ್ಲಿ ವಾಸಿಸುತ್ತಿರುವ ಪ್ರಧಾನಮಂತ್ರಿ ಪುನರ್ವಸತಿ ಪ್ಯಾಕೇಜ್ನಡಿ ನೇಮಕಗೊಂಡ ಉದ್ಯೋಗಿಗಳು ಸೇರಿದಂತೆ ಕಾಶ್ಮೀರಿ ಪಂಡಿತರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಇನ್ನಷ್ಟು ಸುಧಾರಿಸಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

