ವಿಜಯವಾಡ: ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಯೋಗ ಗುರು ಬಾಬಾ ರಾಮದೇವ್ ಜೊತೆಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ರಾಜ್ಯದಲ್ಲಿ ಯೋಗದ ಉತ್ತೇಜನಕ್ಕೆ ಹೊಸ ಉಪಕ್ರಮವನ್ನು ಘೋಷಿಸಿದರು.
ನಿತ್ಯ ಯೋಗಾಭ್ಯಾಸ, ಧ್ಯಾನ ಮತ್ತು ಪ್ರಾಣಾಯಾಮದಿಂದ ಸಾರ್ವಜನಿಕರ ಆರೋಗ್ಯ ವೃದ್ಧಿಯಾಗಲಿದ್ದು, ಆಸ್ಪತ್ರೆ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದಿದ್ದಾರೆ.
ಯೋಗಾಂಧ್ರ ಉಪಕ್ರಮದಡಿ ಇಂದಿರಾಗಾಂಧಿ ಮುನ್ಸಿಪಲ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ಯೋಗ ಜೀವನ ಶೈಲಿಯಾಗಬೇಕು ಮತ್ತು ಆಂಧ್ರ ಪಪ್ರದೇಶದ ಪ್ರತಿಯೊಂದು ಮನೆಗೂ ತಲುಪಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ವರ್ಣ ಗ್ರಾಮದಡಿಯಲ್ಲಿ ಶಾಶ್ವತ ಯೋಗ ಕೇಂದ್ರಗಳನ್ನು ನಿರ್ಮಿಸಲಾಗುವುದು. ವಾರ್ಡ್, ಜಿಲ್ಲೆ ಮತ್ತು ಮಂಡಲ ವಲಯದ ಅಧಿಕಾರಿಗಳನ್ನು ಮೇಲ್ವಿಚಾರಣೆಗೆ ನೇಮಕ ಮಾಡಲಾಗುವುದು. ಪ್ರಮಾಣಿತ ಯೋಗದ ಶಿಷ್ಟಾಚಾರವನ್ನು ರೂಪಿಸುವ ದೃಷ್ಟಿಯಿಂದ ತಜ್ಞರ ಸಮಿತಿ ರಚಿಸಲಾಗುವುದು ಎಂದಿದ್ದಾರೆ. ಇದಕ್ಕಾಗಿ ಮೀಸಲಾದ ಯೋಗಾಂಧ್ರ ಪೋರ್ಟಲ್ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
'ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಅತ್ಯಗತ್ಯ. ಜನರು ಪ್ರತಿದಿನ ಒಂದು ಗಂಟೆ ಈ ಅಭ್ಯಾಸಕ್ಕೆ ಮೀಸಲಿಟ್ಟರೆ, ಆರೋಗ್ಯಕರ ಜೀವನವನ್ನು ನಡೆಸಬಹುದು ಮತ್ತು ಆಸ್ಪತ್ರೆಯ ಅವಲಂಬನೆ ಗಮನಾರ್ಹವಾಗಿ ಕಡಿಮೆ ಮಾಡಬಹುದು' ಎಂದು ನಾಯ್ಡು ಹೇಳಿದರು.
ಯೋಗಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ ಮುಖ್ಯಮಂತ್ರಿ, ನಾಯ್ಡು, ಪ್ರಧಾನ ಮಂತ್ರಿಗಳ ಪ್ರಯತ್ನಗಳಿಂದಾಗಿ ಈಗ 190 ದೇಶಗಳಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತವನ್ನು ಜಗತ್ತಿಗೆ ಮಾರ್ಗದರ್ಶನ ನೀಡುವ ಸಾಮರ್ಥ್ಯವಿರುವ ವಿಶ್ವಗುರು ಎಂದು ಬಣ್ಣಿಸಿದ್ದಾರೆ.
ತಂತ್ರಜ್ಞಾನವನ್ನು ಆಧ್ಯಾತ್ಮಿಕತೆಯೊಂದಿಗೆ ಸಂಯೋಜಿಸುವುದರಲ್ಲಿ ಭವಿಷ್ಯವಿದೆ ಎಂದ ನಾಯ್ಡು, ಯೋಗ ಮತ್ತು ಆಧ್ಯಾತ್ಮಿಕ ಅಭ್ಯಾಸಗಳ ಮೂಲಕ ಆರೋಗ್ಯಕರ, ಶ್ರೀಮಂತ ಮತ್ತು ಸಂತೋಷದ ಆಂಧ್ರಪ್ರದೇಶವನ್ನು ಕಟ್ಟಬಹುದು ಎಂದರು.
ಮುಂದಿನ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ತಿರುಪತಿಯಲ್ಲಿ ಆಯೋಜಿಸಲಾಗುವುದು ಎಂದು ಅವರು ಘೋಷಿಸಿದರು.

