ಕಾಸರಗೋಡು: ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ಮಂಡಿಸಿರುವ ಬಜೆಟ್ ಖಾಸಗಿ ಬಸ್ ಮಾಲೀಕರನ್ನು ಸಂಕಷ್ಟಕ್ಕೆ ತಳ್ಳಿರುವುದಾಗಿ ಖಾಸಗಿ ಬಸ್ ಮಾಲಿಕರ ಒಕ್ಕೂಟ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಗಿರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರತಿಪಕ್ಷ ಮುಖಂಡರಾಗಿದ್ದ ಸಂದರ್ಭ ಕೇರಳಾದ್ಯಂತ ಆಯೋಜಿಸಲಾಗಿದ್ದ ಜನ ಮುನ್ನಡೆ ಯಾತ್ರೆ ಸಂದರ್ಭ ಖಾಸಗಿ ಬಸ್ ಉದ್ದಿಮೆ ಸಂರಕ್ಷಿಸುವುದಾಗಿ ಘೋಷಿಸಿದ್ದ ಇಂದಿನ ಮುಖ್ಯಮಂತ್ರಿ ವಿ.ಡಿ ಸತೀಶನ್ ಅವರು, ಕೆಎಸ್ಸಾರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಜಾರಿಗೊಳಿಸಿರುವುದರಿಂದ ವಿನಾಶದ ಅಂಚಿಗೆ ಸಾಗುತ್ತಿರುವ ಖಾಸಗಿ ಬಸ್ ಉದ್ದಿಮೆಯನ್ನು ಸಂರಕ್ಷಿಸಲು ಯಾವುದೇ ಯೋಜನೆ ಕೈಗೊಂಡಿಲ್ಲ. ಕೆಎಸ್ಸಾರ್ಟಿಸಿ ಬಸ್ಗಳು ಸಂಚರಿಸದ ಗ್ರಾಮೀಣ ಪ್ರದೇಶಗಳಿಂದ ಖಾಸಗಿ ಬಸ್ಗಳನ್ನು ಆಶ್ರಯಿಸಿ ಬರುವ ಮಹಿಳಾ ಪ್ರಯಾಣಿಕರು ಕೆಎಸ್ಸಾರ್ಟಿಸಿ ಬಸ್ ಸಂಚಾರವಿರುವ ಹೆದ್ದಾರಿಯಲ್ಲಿ ಇಳಿದು ಮತ್ತೆ ಕೆಎಸ್ಸಾರ್ಟಿಸಿ ಬಸ್ಸನ್ನೇರುತ್ತಾರೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಖಾಸಗಿ ಬಸ್ಗಳ ಆದಾಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಕೇರಳದಲ್ಲಿ, ಸರ್ಕಾರವು ಕೆಎಸ್ಆರ್ಟಿಸಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ ಮೂಲಕ ಉತ್ತಮ ಯೋಜನೆ ಜಾರಿಗೊಳಿಸಿದ್ದರೂ, ಇದರಿಂದ ಖಾಸಗಿ ಬಸ್ ಉದ್ದಿಮೆ ಸಂಪೂರ್ಣ ನೆಲಕಚ್ಚುವ ಸಥಿತಿ ನಿರ್ಮಾಣವಾಗಿದೆ. ಖಾಸಗಿ ಬಸ್ಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ಬಜೆಟ್ನಲ್ಲಿ ರಸ್ತೆ ತೆರಿಗೆಯನ್ನು ಶೇ.50 ರಷ್ಟು ಕಡಿತಗೊಳಿಸಿರುವುದಾಗಿ ಘೋಷಿಸಿದ್ದರೂ, ಸರ್ಕಾರದ ಈ ಘೋಷಣೆಯಿಂದ ತ್ರೈಮಾಸಿಕ 25ರಿಂದ 30ಸಾವಿರ ರಊ. ವರೆಗೆ ತೆರಿಗೆ ಪಾವತಿಸುತ್ತಿರುವ ಖಾಸಗಿ ಬಸ್ಗಳಿಗೆ ದಿನವೊಂದಕ್ಕೆ 150ರೂ. ಮಾತ್ರ ಲಾಭ ಸಾಧ್ಯ. ಮಹಿಳೆಯರ ಉಚಿತ ಪ್ರಯಾಣ ಯೋಜನೆ ಜಾರಿಯಾದ ನಂತರ ಪ್ರತಿ ಬಸ್ ಮಾಲಿಕರು ದೈನಂದಿನ 2ರಿಂದ 3ಸಾವಿರ ರಊ. ವರೆಗೆ ನಷ್ಟ ಅನುಭವಿಸುತ್ತಿದ್ದು, ಇದೇ ರೀತಿ ಮುಂದುವರಿದಲ್ಲಿ ಬಸ್ ಮಾಲಿಕರು ಸಾಲದ ಶೂಲಕ್ಕೆ ಸಿಲುಕಬೇಕಾಗುತ್ತದೆ. ಬಸ್ ಮಾಲಿಕರ ಸಂಕಷ್ಟ ಮನಗಂಡು, ಉದ್ದಿಮೆ ಸಂರಕ್ಷಿಸುವುದರ ಜತೆಗೆ ಹಲವಾರು ಮಂದಿ ನೌಕರರ ಉದ್ಯೋಗ ಖಾತ್ರಿಗಾಗಿ ಬದಲಿ ವ್ಯವಸ್ಥೆ ಕೈಗೊಳ್ಳುವಂತೆ ಅವರು ಸರ್ಕರವನ್ನು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಮಿತಿ ಸದಸ್ಯ ಸಿ.ಎ. ಮುಹಮ್ಮದ್ಕುಞÂ, ಕಾರ್ತಿಕ್ ರಾಜ್ ಟಿ.ಎಸ್., ಪಿ.ಎ. ಮುಹಮ್ಮದ್ಕುಞÂ, ಪಿ. ಚಂದ್ರಶೇಖರ, ಬಿ. ರತ್ನಾಕರ ಆಳ್ವ ಉಪಸ್ಥಿತರಿದ್ದರು.



