ನವದೆಹಲಿ: ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (PMRBP) ಎಂಬುದು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಪ್ರತಿ ವರ್ಷ ನೀಡುವ ದೇಶದ ಅತ್ಯುನ್ನತ ನಾಗರಿಕ ಮಕ್ಕಳ ಪ್ರಶಸ್ತಿಯಾಗಿದೆ. ಅಸಾಧಾರಣ ಪ್ರತಿಭೆ ಮತ್ತು ಸಾಧನೆ ಮಾಡಿದ ದೇಶದ ಪುಟಾಣಿಗಳನ್ನು ಗುರುತಿಸಿ ಈ ಗೌರವ ನೀಡಲಾಗುತ್ತದೆ.
ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅಥವಾ ನಾಮನಿರ್ದೇಶನಗೊಳ್ಳುವ ಮಗುವಿನ ವಯಸ್ಸು 5 ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಮತ್ತು 18 ವರ್ಷದೊಳಗಿನವರಾಗಿರಬೇಕು. ಮಗು ಕಡ್ಡಾಯವಾಗಿ ಭಾರತೀಯ ನಾಗರಿಕನಾಗಿರಬೇಕು ಮತ್ತು ಭಾರತದಲ್ಲಿ ವಾಸಿಸುತ್ತಿರಬೇಕು.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಉಸ್ತುವಾರಿಯಲ್ಲಿ ನಡೆಯುವ ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು 2026ರ ಜುಲೈ 31 ಕೊನೆಯ ದಿನವಾಗಿದೆ. ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರತಿ ವರ್ಷ ಡಿಸೆಂಬರ್ 26ರಂದು 'ವೀರ ಬಾಲ ದಿವಸ್' ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.
ಈ ಪ್ರಶಸ್ತಿ ವಿಜೇತ ಮಕ್ಕಳಿಗೆ ಒಂದು ವಿಶೇಷ ಪದಕ, ಪ್ರಮಾಣಪತ್ರ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುತ್ತದೆ. 2019ರಲ್ಲಿ ಈ ಪ್ರಶಸ್ತಿ ಆರಂಭವಾದಾಗಿನಿಂದ ಇದುವರೆಗೆ ದೇಶದ ಒಟ್ಟು 203 ಮಕ್ಕಳು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಪ್ರತಿ ವರ್ಷ ದೇಶದಾದ್ಯಂತ ಸುಮಾರು 25 ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.
ಯಾವ 6 ಕ್ಷೇತ್ರಗಳಲ್ಲಿ ಪ್ರಶಸ್ತಿ ನೀಡಲಾಗುತ್ತದೆ?
ಶೌರ್ಯ: ತಮ್ಮ ಜೀವದ ಹಂಗು ತೊರೆದು ಇತರರ ಪ್ರಾಣ ಉಳಿಸಿದ ಅಥವಾ ಪ್ರಕೃತಿ ವಿಕೋಪ/ಮಾನವ ನಿರ್ಮಿತ ಆಪತ್ತಿನ ಸಮಯದಲ್ಲಿ ಅಸಾಧಾರಣ ಧೈರ್ಯ, ಸಮಯಪ್ರಜ್ಞೆ ಮೆರೆದ ಮಕ್ಕಳಿಗೆ.
ಸಾಮಾಜ ಸೇವೆ: ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗಾಗಿ ಸಮುದಾಯವನ್ನು ಒಟ್ಟುಗೂಡಿಸುವ ನಾಯಕತ್ವ ಗುಣ ಹೊಂದಿರುವ ಮಕ್ಕಳಿಗೆ.
ಪರಿಸರ: ಪರಿಸರ ಸಂರಕ್ಷಣೆಗಾಗಿ ವಿವಿಧ ಹಂತಗಳಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಮಕ್ಕಳಿಗೆ.
ಕ್ರೀಡೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ನಿರಂತರ ಸಾಧನೆ ಮಾಡುತ್ತಿರುವವರಿಗೆ.
ಕಲೆ ಮತ್ತು ಸಂಸ್ಕೃತಿ: ಸಂಗೀತ (ಗಾಯನ ಮತ್ತು ವಾದನ), ನೃತ್ಯ, ಚಿತ್ರಕಲೆ, ಸಾಹಿತ್ಯ ಅಥವಾ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವಲ್ಲಿ ಅತ್ಯುತ್ತಮ ಪ್ರತಿಭೆ ಹೊಂದಿರುವ ಮಕ್ಕಳಿಗೆ.
ವಿಜ್ಞಾನ ಮತ್ತು ತಂತ್ರಜ್ಞಾನ: ಸಮಾಜದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವಂತಹ, ಜನರ ಜೀವನಮಟ್ಟ ಸುಧಾರಿಸುವಂತಹ ಹೊಸ ಆವಿಷ್ಕಾರ ಮಾಡಿದ ಯುವ ವಿಜ್ಞಾನಿಗಳಿಗೆ.
ಪ್ರಶಸ್ತಿಗೆ ಇರುವ ಅರ್ಹತೆಗಳು ಮತ್ತು ನಿಯಮಗಳು:
ಮಗು ಕಡ್ಡಾಯವಾಗಿ ಭಾರತೀಯ ನಾಗರಿಕನಾಗಿರಬೇಕು ಮತ್ತು ಭಾರತದಲ್ಲೇ ವಾಸಿಸುತ್ತಿರಬೇಕು.
ವಯೋಮಿತಿ:
2026ರ ಜುಲೈ 31ಕ್ಕೆ ಅನ್ವಯವಾಗುವಂತೆ ಮಗುವಿಗೆ 5 ವರ್ಷ ತುಂಬಿರಬೇಕು ಮತ್ತು 18 ವರ್ಷ ದಾಟಿರಬಾರದು.
ಮಗುವಿನ ಸಾಧನೆ ಅಥವಾ ಶೌರ್ಯದ ಘಟನೆಯು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ (ಜುಲೈ 31) ಹಿಂದಿನ 2 ವರ್ಷಗಳ ಒಳಗೆ ನಡೆದಿರಬೇಕು. ಈ ಹಿಂದೆ ಯಾವುದೇ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದಿದ್ದರೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಸಾಮಾನ್ಯವಾಗಿ ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಿಲ್ಲ, ಆದರೆ ತೀರಾ ಅಪರೂಪದ ಸಂದರ್ಭಗಳಲ್ಲಿ ಮಾತ್ರ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಹೇಗೆ?:
ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಅರ್ಹ ಮಕ್ಕಳ ಹೆಸರನ್ನು ನಾಮನಿರ್ದೇಶನ ಮಾಡಬಹುದು. ಮಕ್ಕಳು ಸ್ವಯಂ-ನಾಮನಿರ್ದೇಶನಕ್ಕೂ ಅವಕಾಶವಿದೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ರಾಜ್ಯಪಾಲರು, ಸಂಸದರು, ಜಿಲ್ಲಾಧಿಕಾರಿಗಳು ಹಾಗೂ ಕೇಂದ್ರೀಯ ಮತ್ತು ನವೋದಯ ವಿದ್ಯಾಲಯಗಳ ಮೂಲಕವೂ ಶಿಫಾರಸು ಮಾಡಬಹುದು.
ಅರ್ಜಿದಾರರು ಅಧಿಕೃತ ರಾಷ್ಟ್ರೀಯ ಪ್ರಶಸ್ತಿಗಳ ಪೋರ್ಟಲ್ https://awards.gov.in ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಫಾರ್ಮ್ ಭರ್ತಿ ಮಾಡಬೇಕು. ಮಗುವಿನ ಇತ್ತೀಚಿನ ಫೋಟೋ, ಸಾಧನೆಯ ಪೂರಕ ದಾಖಲೆಗಳು ಮತ್ತು ಗರಿಷ್ಠ 1,000 ಪದಗಳ ಒಳಗಿನ ಸಾಧನೆಯ ವಿವರಣೆಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.

