ಬದಲಿಗೆ, ಈ ವಿಷಯದಲ್ಲಿ ಕಲ್ಕತ್ತಾ ಹೈಕೋರ್ಟ್ಗೆ ಹೋಗುವಂತೆ ನ್ಯಾಯಾಲಯ ಅರ್ಜಿದಾರರಿಗೆ ಸೂಚಿಸಿದೆ.
ಅರ್ಜಿಯು ಕಲ್ಯಾಣ ಯೋಜನೆಗಳು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಡಿತರ) ಸೌಲಭ್ಯಗಳ ಅರ್ಹತೆಗೆ ಸಂಬಂಧಿಸಿದ ವಿಷಯವಾಗಿದೆ. ಹಾಗಾಗಿ, ಮೊದಲ ಹಂತದಲ್ಲಿ ಈ ವಿಷಯವನ್ನು ಪರಿಶೀಲಿಸಲು ಹೈಕೋರ್ಟ್ ಸೂಕ್ತ ವೇದಿಕೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಜಯಮಲ್ಯ ಬಾಗ್ಚಿ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪಶ್ಚಿಮ ಬಂಗಾಳದ ಕೃಷಿ ಕಾರ್ಮಿಕರ ಸಂಘಟನೆ 'ಪಶ್ಚಿಮ ಬಂಗಾ ಖೇತ್ ಮಜೂರ್ ಸಮಿತಿ' ಪರವಾಗಿ ವಕೀಲ ಪ್ರಸನ್ನ ಎಸ್. ಈ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಪಶ್ಚಿಮ ಬಂಗಾಳದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜೂನ್ 4ರಂದು ಹೊರಡಿಸಿರುವ ಆದೇಶ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಇಲಾಖೆಯ ಮೇ 19ರ ಅಧಿಸೂಚನೆಯನ್ನು ಪ್ರಶ್ನಿಸಲಾಗಿದೆ.
ಈ ಎರಡೂ ಕ್ರಮಗಳು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಡಿತರ) ಮತ್ತು ಅನ್ನಪೂರ್ಣ ಯೋಜನೆಯಡಿ ಫಲಾನುಭವಿಗಳನ್ನು ಎಸ್ಐಆರ್ ವರ್ಗೀಕರಣಗಳ ಆಧಾರದಲ್ಲಿ ಆಯ್ಕೆ ಮಾಡಲು ಉದ್ದೇಶಿಸಿವೆ. ಎಸ್ಐಆರ್ನಲ್ಲಿ ಮೃತ, ಸ್ಥಳಾಂತರಗೊಂಡ, ತೆಗೆದುಹಾಕಲಾದ ಮತ್ತು ಗೈರುಹಾಜರಾದ ಮತದಾರರು ಎಂದು ವರ್ಗೀಕರಣ ಮಾಡಲಾಗಿದೆ.
ರಾಜ್ಯ ಸರಕಾರವು ಇದನ್ನು ಯಾಂತ್ರಿಕವಾಗಿ ಜಾರಿಗೆ ತಂದರೆ ಸುಮಾರು 35 ಲಕ್ಷದಿಂದ 60 ಲಕ್ಷ ರೇಷನ್ ಕಾರ್ಡ್ಗಳು ನಿಷ್ಕ್ರಿಯಗೊಳ್ಳಬಹುದು ಎಂದು ಅರ್ಜಿದಾರರು ವಾದಿಸಿದ್ದಾರೆ.
ಈ ವಿಷಯವು ದೇಶಾದ್ಯಂತ ಪರಿಣಾಮ ಬೀರುವುದರಿಂದ ಸುಪ್ರೀಂ ಕೋರ್ಟ್ ಇದನ್ನು ಪರಿಶೀಲಿಸಬೇಕು ಎಂದು ಅರ್ಜಿದಾರರ ವಕೀಲರು ಮನವಿ ಮಾಡಿದರು. ಇದು ರಾಜ್ಯ ಸರಕಾರದ ಕ್ರಮಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ಮೊದಲು ಸಂಬಂಧಪಟ್ಟ ಹೈಕೋರ್ಟ್ ಇದನ್ನು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತು.
ಬೇಸಿಗೆ ರಜೆಯ ನಂತರ ಕಲ್ಕತ್ತಾ ಹೈಕೋರ್ಟ್ ಪುನರಾರಂಭಗೊಂಡಿರುವುದನ್ನು ನೆನಪಿಸಿದ ಪೀಠವು, ''ದಯವಿಟ್ಟು ಇದನ್ನು ಕಲ್ಕತ್ತಾ ಹೈಕೋರ್ಟ್ಗೆ ತೆಗೆದುಕೊಂಡು ಹೋಗಿ'' ಎಂದು ಅರ್ಜಿದಾರರಿಗೆ ತಿಳಿಸಿತು.

