ಬದಿಯಡ್ಕ: ಶ್ರೀರಾಮಚಂದ್ರಾಪುರಮಠದ ಮುಳ್ಳೇರಿಯ ಹವ್ಯಕ ಮಂಡಲದ ಪಳ್ಳತ್ತಡ್ಕ ವಲಯದ ನೇತೃತ್ವದಲ್ಲಿ ಐತಿಹಾಸಿಕ ಮೈಲಿಗಲ್ಲಾದ 300ನೇ ಪ್ರತಿರುದ್ರ ಕಾರ್ಯಕ್ರಮವು ಪಳ್ಳತ್ತಡ್ಕದ ಶ್ರೀ ಮುದ್ದುಮಂದಿರದಲ್ಲಿ ಅತ್ಯಂತ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ಶನಿವಾರ ಜರಗಿತು. ಲೋಕಕಲ್ಯಾಣ ಹಾಗೂ ಸಮಾಜದ ಸ್ವಾಸ್ಥ್ಯಕ್ಕಾಗಿ ಹಮ್ಮಿಕೊಳ್ಳಲಾದ ಈ ಮಹತ್ತರ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಳ್ಳೇರಿಯ ಮಂಡಲ ಹಾಗೂ ಸುತ್ತಮುತ್ತಲಿನ ವಲಯಗಳ ನೂರಾರು ಭಕ್ತರು ಭಾಗವಹಿಸಿ ಪುನೀತರಾದರು. 430ಕ್ಕೂ ಹೆಚ್ಚು ಮಂದಿ ರುದ್ರ ಪಠಣ ಮಾಡಿದರು. ನಾಡಿನ ಹೆಸರಾಂತ ವೈದಿಕ ಮನೆತನದ ಪುರೋಹಿತರು ಪಾಲ್ಗೊಂಡಿದ್ದರು.
ಶ್ರೀಮಠದ ಅಭಿನಂದನಾ ಪತ್ರವನ್ನು ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ ಪೆರಿಯಪ್ಪು ಪಳ್ಳತ್ತಡ್ಕ ವಲಯದ ಪದಾಧಿಕಾರಿಗಳಿಗೆ ನೀಡಿದರು. ಅವರು ಈ ಸಂದರ್ಭದಲ್ಲಿ ಮಾತನಾಡಿ ನಿರಂತರವಾಗಿ ಸಮಾಜದ ಒಳಿತಿಗಾಗಿ, ವೈದಿಕ ಸಂಸ್ಕøತಿಯ ಉಳಿವಿಗಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವುದು ಹವ್ಯಕ ಸಮಾಜದ ಹೆಮ್ಮೆ. ಪಳ್ಳತ್ತಡ್ಕ ವಲಯವು ಅತ್ಯಂತ ಶ್ರದ್ಧೆಯಿಂದ ಮುನ್ನಡೆಸಿಕೊಂಡು ಬಂದ ಈ ಪ್ರತಿರುದ್ರ ಕಾರ್ಯಕ್ರಮವು ಇಂದು 300ರ ಮೈಲಿಗಲ್ಲು ತಲುಪಿರುವುದು ಶ್ಲಾಘನೀಯ ಎಂದರು. ಶ್ರೀಮಠದ ಶೃತಿಸಾಗರ ಬಿರುದಾಂಕಿತ ವೇದಬ್ರಹ್ಮ ಪಳ್ಳತ್ತಡ್ಕ ಶಂಕರನಾರಾಯಣ ಘನಪಾಠಿಗಳು ವೇದ ಹಾಗೂ ರುದ್ರ ಪಠಣದ ಮಹತ್ವವನ್ನು ತಿಳಿಸಿದರು. ಮಂಗಳೂರು, ಉಪ್ಪಿನಂಗಡಿ, ಮುಳ್ಳೇರಿಯ ಮಂಡಲಗಳಿಂದ ಶಿಷ್ಯಭಕ್ತರು ಪಾಲ್ಗೊಂಡಿದ್ದರು. ಬೆಳಗ್ಗೆ 12 ತೆಂಗಿನಕಾಯಿ ಗಣಪತಿ ಹೋಮ, ಅಷ್ಟಾವಧಾನ ಸೇವೆಯೊಂದಿಗೆ ರಾತ್ರಿ ಶಿವಪೂಜೆ ನಡೆಯಿತು.
ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಅನುಗ್ರಹದೊಂದಿಗೆ ಗೋಕರ್ಣ ಮಂಡಲದ ವಿವಿಧ ವಲಯಗಳಲ್ಲಿ ಪ್ರದೋಶದ ಸಂದರ್ಭ ಪ್ರತಿರುದ್ರ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆದುಬರುತ್ತಿದ್ದು, ಶ್ರೀಗಳ ಅನುಗ್ರಹ ಆಶೀರ್ವಚನವನ್ನು ಪರದೆಯಲ್ಲಿ ಪ್ರದರ್ಶಿಸಲಾಯಿತು.

.jpg)
.jpg)
