ತಿರುವನಂತಪುರಂ: ಕೇಂದ್ರ ಸರ್ಕಾರದ ಪ್ರತಿಷ್ಠಿತ ಅಮೃತ ಭಾರತ ನಿಲ್ದಾಣ ಯೋಜನೆಯು ಕೇರಳದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸುತ್ತಿದೆ. ಈ ಯೋಜನೆಯಡಿಯಲ್ಲಿ, ಆಧುನಿಕ ಪ್ರಯಾಣ ಸೌಲಭ್ಯಗಳು ಮತ್ತು ವಿಶ್ವ ದರ್ಜೆಯ ವಿನ್ಯಾಸವನ್ನು ಖಚಿತಪಡಿಸಿಕೊಳ್ಳಲು ನವೀಕರಿಸಲಾದ ಕೇರಳದ 6 ಪ್ರಮುಖ ರೈಲು ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 17, 2026 ರಂದು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ.
ಅಮೃತ ಭಾರತ ಯೋಜನೆಯ ಮೂಲಕ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಅಂಗಮಾಲಿ, ಚಲಕುಡಿ, ತಿರೂರ್, ಪರಪ್ಪನಂಗಡಿ, ನಿಲಂಬೂರ್ ಮತ್ತು ತಲಶ್ಶೇರಿ ನಿಲ್ದಾಣಗಳನ್ನು ಆಮೂಲಾಗ್ರ ಬದಲಾವಣೆಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಹೊಸ ಫ್ಲೈಓವರ್ಗಳು, ವಿಶ್ರಾಂತಿ ಪ್ರದೇಶಗಳು, ಆಧುನಿಕ ಟಿಕೆಟ್ ಕೌಂಟರ್ಗಳು ಮತ್ತು ಅತ್ಯುತ್ತಮ ಪಾಕಿರ್ಂಗ್ ಸೌಲಭ್ಯಗಳನ್ನು ಒದಗಿಸಲಾಗಿದೆ.
ತಿರುರ್ ನಿಲ್ದಾಣವನ್ನು 26.55 ಕೋಟಿ ರೂ. ವೆಚ್ಚದಲ್ಲಿ, ತಲಶ್ಶೇರಿ ನಿಲ್ದಾಣವನ್ನು 22.32 ಕೋಟಿ ರೂ. ವೆಚ್ಚದಲ್ಲಿ, ನಿಲಂಬೂರ್ ರಸ್ತೆಯನ್ನು 16.44 ಕೋಟಿ ರೂ. ವೆಚ್ಚದಲ್ಲಿ ಮತ್ತು ಪರಪ್ಪನಂಗಡಿ ನಿಲ್ದಾಣವನ್ನು 14.21 ಕೋಟಿ ರೂ. ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಲಾಗಿದ್ದು, ಇವೆಲ್ಲವೂ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಗೆ ಬರುತ್ತವೆ. ತಿರುವನಂತಪುರಂ ವಿಭಾಗದಲ್ಲಿ, ಚಾಲಕುಡಿಯನ್ನು 9.94 ಕೋಟಿ ರೂ. ಮತ್ತು ಅಂಗಮಾಲಿಯನ್ನು 9.28 ಕೋಟಿ ರೂ. ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಲಾಗಿದೆ.
ಅಮೃತ ಭಾರತ ನಿಲ್ದಾಣ ಯೋಜನೆಯಡಿಯಲ್ಲಿ ಕೇರಳದಲ್ಲಿ ಒಟ್ಟು 35 ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ನೆರೆಯ ತಮಿಳುನಾಡಿನಲ್ಲಿರುವ ಚೆನ್ನೈ ಪಾರ್ಕ್, ಕೂನೂರು ಮತ್ತು ಚಿನ್ನ ಸೇಲಂ ನಿಲ್ದಾಣಗಳನ್ನು ಸಹ ಅದೇ ದಿನ ಉದ್ಘಾಟಿಸಲಾಗುವುದು. 2023 ರಲ್ಲಿ ರೈಲ್ವೆ ಸಚಿವಾಲಯವು ಪ್ರಾರಂಭಿಸಿದ ಅಮೃತ ಭಾರತ ನಿಲ್ದಾಣ ಯೋಜನೆಯು ದೇಶಾದ್ಯಂತ 1,300 ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಆಧುನಿಕ ಮತ್ತು ಸಮಗ್ರ ಸಾರಿಗೆ ಕೇಂದ್ರಗಳಾಗಿ ಪುನರಾಭಿವೃದ್ಧಿ ಮಾಡುವ ಗುರಿಯನ್ನು ಹೊಂದಿದೆ.

