ಕಾಸರಗೋಡು: ಕೆಎಸ್ಸಾರ್ಟಿಸಿ ಪ್ರಿಯದರ್ಶಿನಿ ಯೋಜನೆಯನ್ವಯ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಸಂಪೂರ್ಣ ನೆಲಕಚ್ಚಿರುವ ಖಾಸಗಿ ಬಸ್ ಉದ್ಯಮವನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಜುಲೈ 6ರಂದು ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ಬಸ್ ಸಾಂಕೇತಿಕ ಮುಷ್ಕರ ನಡೆಸಲಿರುವುದಾಗಿ ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಷನ್ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಕೆ. ಗಿರೀಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಷನ್ ಕಾಸರಗೋಡು ಜಿಲ್ಲಾ ಘಟಕ ಹಾಗೂ ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಮುಷ್ಕರ ನಡೆಯಲಿದ್ದು, ಅಂದು ಬೆಳಗ್ಗೆ 10ಕ್ಕೆ ಬಸ್ ಮಾಲಿಕರು ಹಾಗೂ ನೌಕರರು ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ಧರಣಿ ನಡೆಯಲಿರುವುದು.
ಕೆಎಸ್ಸಾರ್ಟೀಸಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಳಭ್ಯ ಏರ್ಪಡಿಸಿರುವುದರಿಂದ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರಿಲ್ಲದ ಸ್ಥಿತಿ ನಿರ್ಮಣವಾಗಿದೆ. ಪ್ರತಿದಿನದ ಸಂಗ್ರಹ ಅರ್ಧಕ್ಕರ್ಧ ಕುಸಿದಿದ್ದು, ಇದೇ ಕಾರಣದಿಂದ ಜಿಲ್ಲೆಯ ಕೆಲವೊಂದು ರೂಟುಗಳಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮತ್ತಷಟು ಬಸ್ಗಳು ಸಂಚಾರ ಸ್ಥಗಿತಗೊಳಿಸಲು ಮುಂದಾಗಿದೆ. ಬಸ್ ಸಿಬಂದಿ ಇತರ ಉದ್ಯೋಗವನ್ನು ಅರಸಿ ತೆರಳುವ ಸ್ಥಿತಿ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಹಾಗೂ ಸಿಬ್ಬಂದಿ ಸುರಕ್ಷತೆ ಬೇಡಿಕೆಯೊಂದಿಗೆ ಮುಷ್ಕರ ಆಯೋಜಿಸಿರುವುದಾಗಿ ತಿಳಿಸಿದರು.
ಕೆಎಸ್ಸಾರ್ಟಿಸಿಯಲ್ಲಿ ಉಚಿತ ಪ್ರಯಾಣವನ್ನು ದಿನಕ್ಕೆ ಎರಡು ಬಾರಿ ಸೀಮಿತಗೊಳಿಸುವುದರೊಂದಿಗೆ ಇದಕ್ಕೆ ಮತದಾರರ ಗುರುತಿನ ಚೀಟಿ ಪರಿಗಣಿಸಬೇಕು, ಅಂತಾರಾಜ್ಯ ಸಂಚಾರದ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬಾರದು, ಉಚಿತ ಪ್ರಯಾಣ ಸೌಲಭ್ಯವನ್ನು ಕೇರಳದ ಮಹಿಳೆಯರಿಗೆ ಮಾತ್ರ ಸೀಮಿತಗೊಳಿಸಿ ಮತ್ತು ಅದನ್ನು ರಾಜ್ಯದೊಳಗಿನ ಪ್ರಯಾಣಕ್ಕೆ ಮಾತ್ರ ಅನ್ವಯವಾಗುವಂತೆ ಮಾಡಬೇಕು, ಡೀಸೆಲ್ ಮೇಲೆ ಶೇ. 50ರಷ್ಟು ಸಬ್ಸಿಡಿ ನೀಡಬೇಕು, ಎಲ್ಲಾ ಮಹಿಳಾ ಸರ್ಕಾರಿ ನೌಕರರನ್ನು ಉಚಿತ ಪ್ರಯಾಣ ಯೋಜನೆಯಿಂದ ಹೊರತುಪಡಿಸಿ, ವಿದ್ಯಾರ್ಥಿಗಳು ಹಾಗೂ 65 ವರ್ಷ ಮೇಲ್ಪಟ್ಟ ಪುರುಷರು ಮತ್ತು ಮಹಿಳೆಯರನ್ನು ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಕಷ್ಟದಲ್ಲಿರುವ ಖಾಸಗಿ ಬಸ್ ಉದ್ಯಮವನ್ನು 'ಪ್ರಿಯದರ್ಶಿನಿ' ಯೋಜನೆಯ ಮೂಲಕ ರಕ್ಷಿಸುವಂತೆ ಒತ್ತಾಯಿಸಿ, ಜುಲೈ 20 ರಿಂದ 25 ರವರೆಗೆ ತಿರುವನಂತಪುರದ ಸೆಕ್ರೆಟೇರಿಯೆಟ್ ಒಂದುವಾರದ ಸರಣಿ ಪ್ರತಿಭಟನೆ ನಡೆಸಲು ಜಂಟಿ ಕ್ರಿಯಾ ಸಮಿತಿ ತೀರ್ಮಾನಿಸಿರುವುದಾಗಿ ತಿಳಿಸಿದರು.

