ಅಯೋಧ್ಯೆ: ರಾಮಮಂದಿರಕ್ಕೆ ಕಾಂಗ್ರೆಸ್ ನಿಯೋಗ ಭೇಟಿ ನೀಡುವ ಪ್ರಸ್ತಾವನೆಗೆ ಮುನ್ನ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್ ಅವರನ್ನು ಅಯೋಧ್ಯೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.
ಭಕ್ತರ ದೇಣಿಗೆ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದ ವಿವಾದದ ನಡುವೆ ಕಾಂಗ್ರೆಸ್ ನಾಯಕರು ರಾಮಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವುದನ್ನು ತಡೆಯಲು ಬಿಜೆಪಿ ಸರಕಾರ ಈ ಕ್ರಮವನ್ನು ಕೈಗೊಂಡಿದ್ದು, ಇದು "ಹೇಡಿತನದ ಪ್ರಯತ್ನ" ಎಂದು ಅಜಯ್ ರಾಯ್ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಜಯ್ ರಾಯ್, ಅಯೋಧ್ಯೆಗೆ ಬಂದ ಕೆಲವೇ ಸಮಯದ ಬಳಿಕ ನಮ್ಮನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಸರಕಾರ "ಸರ್ವಾಧಿಕಾರಿ" ಧೋರಣೆಯಲ್ಲಿ ವರ್ತಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಅಯೋಧ್ಯೆಯಲ್ಲಿ ನಡೆದಿರುವ ದೇಣಿಗೆ ಕಳ್ಳತನ ಮತ್ತು ಭೂ ಹಗರಣಗಳಲ್ಲಿ ಭಾಗಿಯಾಗಿರುವವರು "ಭಗವಾನ್ ರಾಮನ ಭಕ್ತರಿಗೆ ಹೆದರುತ್ತಿದ್ದಾರೆ" ಎಂದು ಆರೋಪಿಸಿರುವ ಅವರು, "ನಾವು ತಲೆಬಾಗುವುದಿಲ್ಲ" ಎಂದು ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಈ ಕುರಿತು ಕಾಂಗ್ರೆಸ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ರಾಮಮಂದಿರಕ್ಕೆ ಭೇಟಿ ನೀಡುವ ನಿಯೋಗವನ್ನು ಮುನ್ನಡೆಸಲು ಅಯೋಧ್ಯೆಗೆ ಆಗಮಿಸಿದ್ದ ಅಜಯ್ ರಾಯ್ ಅವರನ್ನು ನಗರದ ಹೋಟೆಲ್ ಪದಮ್ ಶ್ರೀ ಪ್ಯಾಲೇಸ್ನಲ್ಲಿಯೇ ನಿರ್ಬಂಧಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಂಗಳವಾರ ನಿಗದಿಯಾಗಿದ್ದ ಭೇಟಿಯ ಕುರಿತು ಸ್ಥಳೀಯ ಆಡಳಿತಕ್ಕೆ ಈಗಾಗಲೇ ಮಾಹಿತಿ ನೀಡಲಾಗಿತ್ತು ಎಂದು ಪಕ್ಷ ತಿಳಿಸಿದೆ.
ಪ್ರತಾಪ್ಗಢ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ನೀರಜ್ ತ್ರಿಪಾಠಿ ಅವರನ್ನು ಯಾವುದೇ ಕಾರಣವಿಲ್ಲದೆ ಪೊಲೀಸರು ಬಂಧಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
"ಶ್ರೀರಾಮ ಯಾವುದೇ ಒಂದು ರಾಜಕೀಯ ಪಕ್ಷ ಅಥವಾ ಸಿದ್ಧಾಂತಕ್ಕೆ ಸೇರಿದವರಲ್ಲ. ಅವರು ಇಡೀ ದೇಶದ ನಂಬಿಕೆ ಮತ್ತು ಸಂಸ್ಕೃತಿಯ ಸಂಕೇತವಾಗಿದ್ದಾರೆ. ಭಕ್ತರು ಅಯೋಧ್ಯೆಗೆ ತೆರಳುವುದನ್ನು ತಡೆಯುವುದು ಸಂವಿಧಾನಬಾಹಿರ" ಎಂದು ಕಾಂಗ್ರೆಸ್ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಜಯ್ ರಾಯ್ ನೇತೃತ್ವದ ನಿಯೋಗದಲ್ಲಿ ಸಂಸದರಾದ ಕಿಶೋರಿ ಲಾಲ್ ಶರ್ಮಾ (ಅಮೇಥಿ), ರಾಕೇಶ್ ರಾಥೋರ್ (ಸೀತಾಪುರ), ಉಜ್ವಲ್ ರಮಣ್ ಸಿಂಗ್ (ಪ್ರಯಾಗರಾಜ್) ಮತ್ತು ತನುಜ್ ಪುನಿಯಾ (ಬಾರಾಬಂಕಿ) ಸೇರಿದ್ದಾರೆ. ಬಾರಾಬಂಕಿ ಮಾಜಿ ಸಂಸದ ಎಸ್.ಪಿ. ಗೌತಮ್, ಮಾಜಿ ಎಂಎಲ್ಸಿ ದೀಪಕ್ ಸಿಂಗ್, ಮಾಜಿ ಮಹಾರಾಜ್ಗಂಜ್ ಶಾಸಕ ವೀರೇಂದ್ರ ಚೌಧರಿ ಮತ್ತು ಬಾರಾಬಂಕಿ ಮಾಜಿ ಶಾಸಕಿ ಮಿತಾ ಗೌತಮ್ ಕೂಡ ಭೇಟಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಶ್ರೀರಾಮ ಜನ್ಮಭೂಮಿ ದೇವಸ್ಥಾನದಲ್ಲಿ ಭಕ್ತರು ನೀಡುವ ದೇಣಿಗೆಗಳ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸಿದ ಬಳಿಕ ಎಂಟು ಮಂದಿಯನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಿಯೋಗದ ಈ ಭೇಟಿ ಮಹತ್ವ ಪಡೆದಿದೆ.
ಪ್ರಕರಣದಲ್ಲಿ ಬಂಧಿತರಾದವರು ರಾಮಮಂದಿರದಲ್ಲಿ ಭಕ್ತರು ನೀಡಿದ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಎಣಿಸುವ ಹಾಗೂ ನಿರ್ವಹಿಸುವ ಜವಾಬ್ದಾರಿ ಹೊಂದಿದ್ದ ತಂಡದ ಸದಸ್ಯರಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಬಂಧನಗಳು ಕೇವಲ ಕೆಳಹಂತದ ಸಿಬ್ಬಂದಿಯನ್ನು ಮಾತ್ರ ಗುರಿಯಾಗಿಸಿಕೊಂಡಿದ್ದು, "ಪ್ರಮುಖ ಆರೋಪಿಗಳು" ಇನ್ನೂ ತನಿಖೆಯ ವ್ಯಾಪ್ತಿಗೆ ಬಂದಿಲ್ಲ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಇದೇ ವೇಳೆ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಮೂಲಗಳ ಪ್ರಕಾರ, ದೇಣಿಗೆ ನಿರ್ವಹಣೆಯಲ್ಲಿ ಅಕ್ರಮಗಳು ನಡೆಯುತ್ತಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ, ದೇವಸ್ಥಾನದ ನಗದು ಎಣಿಕೆ ಸಿಬ್ಬಂದಿಯನ್ನು ಬದಲಾಯಿಸುವಂತೆ ಬ್ಯಾಂಕ್ ಸುಮಾರು ಮೂರು ತಿಂಗಳ ಹಿಂದೆಯೇ ಶಿಫಾರಸು ಮಾಡಿತ್ತು ಎಂದು ತಿಳಿದುಬಂದಿದೆ.
ಆದರೂ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸದಸ್ಯರು ಈ ಶಿಫಾರಸಿಗೆ ಅನುಮೋದನೆ ನೀಡಿಲ್ಲ ಎಂದು ಆರೋಪಿಸಲಾಗಿದೆ.

