ತ್ರಿಶ್ಶೂರ್: ಇಲ್ಲಿನ ವೆಳ್ಳನಿಕರದಲ್ಲಿರುವ ಕೇರಳ ಕೃಷಿ ವಿಶ್ವವಿದ್ಯಾಲ ಕ್ಯಾಂಪಸ್ನಲ್ಲಿರುವ ಕೊಳದಲ್ಲಿ ಶನಿವಾರ ಬೆಳಿಗ್ಗೆ ಕರ್ನಾಟಕ ಮೂಲದ 25 ವರ್ಷ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.
ಕಿಶೋರ್ ಕುಮಾರ್ ಗೌಡ ಮೃತ ವಿದ್ಯಾರ್ಥಿ.
ತರಕಾರಿ ವಿಜ್ಞಾನ ವಿಭಾಗದಲ್ಲಿ ಮೊದಲ ವರ್ಷದ ಪಿಎಚ್ಡಿ ವಿದ್ಯಾರ್ಥಿಯಾಗಿದ್ದು, ವಿಶ್ವವಿದ್ಯಾಲಯದ ಹಾಸ್ಟೆಲ್ನಲ್ಲಿ ವಾಸವಾಗಿದ್ದರು.
ವಿಶ್ವವಿದ್ಯಾಲಯ ಆವರಣದಲ್ಲಿರುವ ಹಣ್ಣು ಬೆಳೆ ಸಂಶೋಧನೆ ವಿಭಾಗದಲ್ಲಿ ಇರುವ ಕೊಳದಲ್ಲಿ ಮಧ್ಯರಾತ್ರಿ 12.05 ರಿಂದ 1 ಗಂಟೆ ನಡುವೆ ಶವ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಅವರನ್ನು ನೀರಿನಿಂದ ಹೊರತೆಗೆದು ತ್ರಿಶ್ಶೂರ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಪರೀಕ್ಷಿಸಿದ ವೈದ್ಯರು ರಾತ್ರಿ 2.50ಕ್ಕೆ ಅವರು ಮೃತಪಟ್ಟಿರುವುದಾಗಿ ಹೇಳಿದ್ದಾರೆ.
ಅವರು ವಾಸಿಸುತ್ತಿದ್ದ ಹಾಸ್ಟೆಲ್ ವಾರ್ಡನ್ ನೀಡಿದ ದೂರಿನ ಮೇರೆಗೆ ಬಿಎನ್ಎಸ್ ಸೆಕ್ಷನ್ 194ರಡಿ 'ಅಸಹಜ ಸಾವು' ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಿಸ್ತೃತ ತನಿಖೆ ಪ್ರಗತಿಯಲ್ಲಿದ್ದು, ಬೆಂಗಳೂರಿನಿಂದ ವಿದ್ಯಾರ್ಥಿಯ ಪೋಷಕರ ಆಗಮನಕ್ಕೆ ಕಾಯಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಡ್ರ್ಯಾಗನ್ ಹಣ್ಣು ಕೀಳಲು ಕಿಶೋರ್ ತೆರಳಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆದರೆ ಸಾವಿಗೆ ನಿಖರ ಕಾರಣ ತನಿಖೆಯ ಬಳಿಕವಷ್ಟೇ ಗೊತ್ತಾಗಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

