ಪೆರ್ಲ: ಪೆರ್ಲದಿಂದ ಪಾಣಾಜೆ ಮೂಲಕ ಪುತ್ತೂರು ಸಂಪರ್ಕಿಸುವ ಪೆರ್ಲ-ಸ್ವರ್ಗ (ಸೂರಂಬೈಲು) ಅಂತಾರಾಜ್ಯ ಸಂಪರ್ಕ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಕಳೆದ ಹಲವು ವರ್ಷಗಳಿಂದ ವಿವಿಧ ಹಂತಗಳಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಗಳೇ ರಸ್ತೆಯ ಇಂದಿನ ಈ ದುಸ್ಥಿತಿಗೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆಯ ಇತಿಹಾಸ:
ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ: ಪೆರ್ಲ-ಸ್ವರ್ಗ (ಸೂರಂಬೈಲು) 5.880 ಕಿ.ಮೀ. ಜಿಪಂ ಅಧೀನದಲ್ಲಿದ್ದು, 2012ರಲ್ಲಿ (ಎಂಎಸ್ ನಂ.05/12, ಪಿಡಬ್ಲ್ಯೂಡಿ 7.1.12) ಆದೇಶದ ಪ್ರಕಾರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಹಲವು ಹಂತದ ಕಾಮಗಾರಿ; ಆದರೂ ಇಲ್ಲ ಸುಧಾರಣೆ !
2015 ಡಿಸೆಂಬರ್: ಪಾಣಾಜೆ ಗಡಿ ಭಾಗದಲ್ಲಿ ಕೇವಲ 100 ಮೀಟರ್ ಕಾಂಕ್ರೀಟ್ ರಸ್ತೆ ನಿರ್ಮಿಸಲಾಯಿತು.
2017 ಫೆಬ್ರವರಿ: ಪೆರ್ಲ ಕೂರಿಪುಡೆಯಿಂದ ಗೋಳಿಕಟ್ಟೆಯವರೆಗೆ ಕೇವಲ 3.9 ಮೀಟರ್ನಷ್ಟು ಅತ್ಯಂತ ಕಿರಿದಾದ ಅಗಲದಲ್ಲಿ ಮೆಕೆಡಾಂ ಪದ್ಧತಿಯಂತೆ ಡಾಂಬರೀಕರಣ ಮಾಡಲಾಗಿತ್ತು.
2024 ಮೇ: ಸಾರ್ವಜನಿಕರ ಒತ್ತಾಯದ ಮೇರೆಗೆ ಈ ಭಾಗದಲ್ಲಿ ತಲಾ ಎರಡು ಅಡಿ ರಸ್ತೆಯನ್ನು ಅಗಲಗೊಳಿಸುವ ಕಾಮಗಾರಿ ನಡೆಸಲಾಯಿತು.
2017 ಡಿಸೆಂಬರ್: ಗೋಳಿಕಟ್ಟೆಯಿಂದ ಪಾಣಾಜೆ ಗಡಿ ಸೂರಂಬೈಲುಕಟ್ಟೆ ವರೆಗಿನ 1.88 ಕಿ.ಮೀ. ರಸ್ತೆಗೆ ಸಾಮಾನ್ಯ ಶೈಲಿಯ ಮರು ಡಾಂಬರೀಕರಣ ಮಾಡಲಾಗಿತ್ತು. ಆದರೆ, ಸಮರ್ಪಕ ನಿರ್ವಹಣೆಯಿಲ್ಲದೆ ಈ ಭಾಗವೂ ಈಗ ಹಾಳಾಗಿದೆ.
ಚರಂಡಿ ವ್ಯವಸ್ಥೆಯಿಲ್ಲದೆ ಕೊಚ್ಚಿಹೋದ ಡಾಂಬರ್:
ಗಾಳಿಗೋಪುರದಿಂದ ಪಾಣಾಜೆ ತನಕ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ, ಮಳೆ ನೀರೆಲ್ಲ ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದಾಗಿ ರಸ್ತೆಯ ಎರಡೂ ಬದಿಯ ಡಾಂಬರ್ ಸಂಪೂರ್ಣವಾಗಿ ಕಿತ್ತುಹೋಗಿದೆ.
ಜಾಗ ಬಿಡುವ ವಿಚಾರದಲ್ಲಿ ಚಾಲಕರ ಮಧ್ಯೆ ನಿತ್ಯ ತಗಾದೆ, ಘರ್ಷಣೆ!:
ಪೆರ್ಲ- ಸ್ವರ್ಗ-ಪಾಣಾಜೆ ರಸ್ತೆ ಕಿರಿದಾಗಿರುವುದರಿಂದ ಎದುರು ಬದುರಾಗಿ ಎರಡು ವಾಹನಗಳು ಬಂದಾಗ ಸಾಗಲು ಜಾಗವಿಲ್ಲದಂತಾಗಿದೆ. ಎದುರಿನ ವಾಹನಕ್ಕೆ ಜಾಗ ಬಿಡಲು ರಸ್ತೆಯಿಂದ ಅರ್ಧ ಅಡಿಯಿಂದ, ಎರಡು ಅಡಿಯಷ್ಟು ಕೆಳಗೆ ವಾಹನವನ್ನು ಇಳಿಸಬೇಕಾದ ಅನಿವಾರ್ಯತೆ ಇದೆ. ಮೊನಚಾದ ಡಾಂಬರ್ ಅಂಚು ತಗುಲಿ ವಾಹನಗಳ ಟಯರ್ಗಳು ಸೀಳುತ್ತಿವೆ. ಸಣ್ಣ ಕಾರುಗಳ ತಳಭಾಗ (ಅಡಿ ಭಾಗ) ನೆಲಕ್ಕೆ ತಾಗಿ ವಾಹನಗಳು ಜಖಂಗೊಳ್ಳುತ್ತಿವೆ. ಜಾಗ ಬಿಡುವ ವಿಚಾರದಲ್ಲಿ ಚಾಲಕರ ಮಧ್ಯೆ ನಿತ್ಯ ತಗಾದೆ, ಘರ್ಷಣೆಗಳು ಮಾಮೂಲಾಗಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ರಸ್ತೆಯನ್ನು ಸಾಕಷ್ಟು ಅಗಲಗೊಳಿಸಿ ಮರುನಿರ್ಮಾಣ ಹಾಗೂ ವೈಜ್ಞಾನಿಕ ಚರಂಡಿ ವ್ಯವಸ್ಥೆಗೆ ಮುಂದಾಗಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೆಎಎ.ಇ.ಬಿ ಕಾಮಗಾರಿಯಿಂದ ರಸ್ತೆ ಧ್ವಂಸ:
ತೋಟಗಾರಿಕಾ ನಿಗಮದ ರಬ್ಬರ್ ತೋಟದ ಮೂಲಕ ಹಾದು ಹೋಗುತ್ತಿದ್ದ ವಿದ್ಯುತ್ ತಂತಿಗಳನ್ನು ತೆರವುಗೊಳಿಸಲು ಕೆಎಸ್.ಇ.ಬಿ ವತಿಯಿಂದ ಭೂಗತ ಕೇಬಲ್ ಅಳವಡಿಸುವ ಕಾಮಗಾರಿ ಸುಮಾರು ನಾಲ್ಕು ತಿಂಗಳ ಹಿಂದೆ ಆರಂಭವಾಗಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ಈ ಕಾಮಗಾರಿಗಾಗಿ ರಸ್ತೆಯನ್ನು ಅಗೆದಿದ್ದರಿಂದ ಕನ್ನಟಿಕಾನದಿಂದ ಗಾಳಿಗೋಪುರ ತನಕದ ರಸ್ತೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಎರಡು ತಿಂಗಳ ಹಿಂದೆ ಕೋಟೆಯಲ್ಲಿ ಸ್ಕೂಟಿ ಪಲ್ಟಿಯಾಗಿ ಅರ್ಚಕ, ನೆಲ್ಲಿಕುಂಜೆಯ ಮಾಧವ ಭಟ್ ಎಚ್.ಎಂ. ಅವರ ಪತ್ನಿ ಶಶಿಪ್ರಭಾ ಗಾಯಗೊಂಡಿದ್ದರು. ತಲೆಗೆ ಗಂಬೀರ ಏಟು ತಗಲಿದ ಅವರು ಎರಡು ತಿಂಗಳಾದರೂ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.
ಅಭಿಮತ:
"ರಸ್ತೆ ಅಭಿವೃದ್ಧಿಯ ವಿಷಯಕ್ಕೆ ಬಂದಾಗ, ಪಕ್ಷಾತೀತವಾಗಿ ಎಲ್ಲರೂ ಒಂದಾಗಬೇಕು. ಸರ್ಕಾರ ಮತ್ತು ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಿದರೆ ನಮ್ಮ ಜವಾಬ್ದಾರಿ ಮುಗಿಯದು. ರಸ್ತೆಯ ದುಃಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತಂದು ನಿರಂತರವಾಗಿ ಪ್ರಗತಿಯನ್ನು ಖಚಿತಪಡಿಸಿಕೊಳ್ಳಬೇಕು. ರಚನಾತ್ಮಕ ಪ್ರಯತ್ನಗಳು ಯಾವುದೇ ಫಲಿತಾಂಶವನ್ನು ನೀಡದಿದ್ದರೆ, ಬೀದಿಗಿಳಿದು ಪ್ರತಿಭಟಿಸಲು ಸಿದ್ಧರಾಗಬೇಕು'.
ಸೋಮಶೇಖರ್ ಜೆ.ಎಸ್.
ಕಾಸರಗೋಡು ಜಿ.ಪಂ.ಸದಸ್ಯರು

.jpg)
.jpg)
-SOMASHEKHARA%20J.S..jpg)
