ಮುಂಬೈ: ಮಹಾರಾಷ್ಟ್ರದ ಮ್ಯಾಂಗ್ರೋವ್ ಅರಣ್ಯಗಳನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಬೇಕು ಎಂದು ಪರಿಸರವಾದಿಗಳು ಅಂತರರಾಷ್ಟ್ರೀಯ ಮ್ಯಾಂಗ್ರೋವ್ ದಿನದಂದು (ಜುಲೈ 27) ಮನವಿ ಮಾಡಿದ್ದಾರೆ.
ಬಾಂಬೆ ಹೈಕೋರ್ಟ್ ಆದೇಶ ನೀಡಿ ಎಂಟು ವರ್ಷಗಳಾದರೂ ಇನ್ನೂ 7,388 ಹೆಕ್ಟೇರ್ ಮ್ಯಾಂಗ್ರೋವ್ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿಲ್ಲ ಎಂದು 'ನ್ಯಾಟ್ಕನೆಕ್ಟ್ ಫೌಂಡೇಶನ್' ತಿಳಿಸಿದೆ.
ಈ ವಿಳಂಬದಿಂದ ಮ್ಯಾಂಗ್ರೋವ್ ಅರಣ್ಯ ಪ್ರದೇಶ ಅತಿಕ್ರಮಣ ಮತ್ತು ನಾಶದ ಅಪಾಯದಲ್ಲಿವೆ ಎಂದು ಸಂಸ್ಥೆ ಎಚ್ಚರಿಸಿದೆ.
ಪ್ರಧಾನಿ ಮೋದಿ ಅವರು ಎಂಐಎಸ್ಎಚ್ಟಿಐ ಯೋಜನೆಯಡಿ ಹೊಸ ಮ್ಯಾಂಗ್ರೋವ್ಗಳನ್ನು ಬೆಳೆಸುವುದರ ಜೊತೆಗೆ ಈಗಿರುವ ಅರಣ್ಯಗಳನ್ನು ರಕ್ಷಿಸುವುದಕ್ಕೂ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದೆ.
ಮುಂಬೈ ಮಹಾನಗರ ಪ್ರದೇಶದಲ್ಲಿ ರಸ್ತೆ ಯೋಜನೆಗಳು, ಕಸ ಹಾಗೂ ಕಟ್ಟಡ ಅವಶೇಷಗಳಿಂದ ಮ್ಯಾಂಗ್ರೋವ್ಗಳಿಗೆ ಹಾನಿಯಾಗುತ್ತಿರುವುದಾಗಿ ಪರಿಸರವಾದಿಗಳು ತಿಳಿಸಿದ್ದಾರೆ. ಉಳಿದಿರುವ ಎಲ್ಲ ಮ್ಯಾಂಗ್ರೋವ್ ಪ್ರದೇಶಗಳನ್ನು ಶೀಘ್ರವೇ ಅರಣ್ಯ ಇಲಾಖೆಗೆ ಹಸ್ತಾಂತರಿಸಿ ಸಂರಕ್ಷಿಸುವಂತೆ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

