ತಿರುವನಂತಪುರಂ: ವಯನಾಡ್ ಜಿಲ್ಲೆಯ ಮೇಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಮಂಗಳವಾರ ಭಾರಿ ಭೂಕುಸಿತ ಸಂಭವಿಸಿದ್ದು, ಭೀಕರ ಕ್ಷಣಗಳು ಸೆರೆಯಾಗಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಗುಡ್ಡದಿಂದ ಮಳೆ ನೀರು ಮತ್ತು ಮಣ್ಣಿನ ಪ್ರವಾಹವು ಧುಮ್ಮಿಕ್ಕಿ ಬರುತ್ತಿದ್ದಂತೆ ಜನರು ತಮ್ಮ ಪ್ರಾಣ ರಕ್ಷಣೆಗಾಗಿ ಓಡುತ್ತಿರುವುದು ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಗುಡ್ಡದಿಂದ ಭಾರಿ ಪ್ರಮಾಣದ ಮಣ್ಣು ಕೆಳಕ್ಕೆ ಕುಸಿಯುತ್ತಿರುವುದು, ಮರಗಳು ಬೇರುಸಮೇತ ಕಿತ್ತುಬರುವುದರ ಜತೆಗೆ ಮನೆಗಳು, ಸಿಕ್ಕಸಿಕ್ಕ ವಾಹನಗಳು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಭೂಕುಸಿತ ವೇಗ ಪಡೆದುಕೊಳ್ಳುತ್ತಿದ್ದಂತೆ, ಭಯಭೀತರಾದ ನಿವಾಸಿಗಳು 'ಬೇಗಬೇಗ ಓಡಿ, ಸ್ನೇಹಿತರೇ...' ಎಂದು ಕೂಗುತ್ತಾ ಓಡಿ ಹೋಗಿದ್ದಾರೆ.
ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಸುರಂಗ ರಸ್ತೆ ಯೋಜನೆಯ ಭಾಗವಾಗಿ ಕಲ್ಲಾಡಿಯ ಮೀನಾಕ್ಷಿ ಸೇತುವೆಯ ಬಳಿ ಸಂಗ್ರಹವಾಗಿದ್ದ ಮಣ್ಣು, ಭಾರಿ ಮಳೆಯಿಂದಾಗಿ ಕುಸಿದು ಬಿದ್ದಿದೆ.
ಭೂಕುಸಿತದಿಂದಾಗಿ ಹಲವರು ಸಿಲುಕಿಕೊಂಡಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ತಂಡಗಳು ಸ್ಥಳದಲ್ಲಿ ಶೋಧ ಕಾರ್ಯ ಮುಂದುವರಿಸಿವೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕುಸಿತ ದುರಂತ ಸಂಬಂಧ ಕೇರಳಂ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ವಯನಾಡ್ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ್ದು, ಮಾಹಿತಿ ಪಡೆದುಕೊಂಡಿದ್ದಾರೆ.

