ಉಪ್ಪಳ: ಮದ್ಯದ ಅಮಲಿನಲ್ಲಿ ಗಲಾಟೆ ನಡೆಸಿದ ಇಬ್ಬರು ಯುವಕರನ್ನು ಮಂಜೇಶ್ವರ ಪೋಲೀಸರು ಬಂಧಿಸಿದ್ದಾರೆ. ಬಾಯಾರುಪದವು ಕ್ಯಾಂಪ್ಕೋ ಸಮೀಪದ ಫಯಾಸ್ (33), ರಾಜಸ್ಥಾನ ನಿವಾಸಿ ಶ್ರೀ ಓಂ ಮೀನಾ (26) ಎಂಬವರು ಬಂಧಿತ ವ್ಯಕ್ತಿಗಳಾಗಿದ್ದಾರೆ. ಶುಕ್ರವಾರ ಸಂಜೆ 6 ಗಂಟೆಗೆ ಈ ಇಬ್ಬರು ಬಾಯಾರು ಆವಳದಲ್ಲಿ ಮದ್ಯ ಸೇವಿಸಿ ಗಲಾಟೆ ನಡೆಸಿದ್ದಾರೆ. ಇದರಿಂದ ಸಮಸ್ಯೆಗೀಡಾದ ಸ್ಥಳೀಯರು ಮಂಜೇಶ್ವರ ಪೋಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಅಲ್ಲಿಗೆ ತಲುಪಿದ ಪೋಲೀಸರು ಫಯಾಸ್ ಹಾಗೂ ಶ್ರೀ ಓಂ ಮೀನಾನನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಳಿಕ ಅವರನ್ನು ಠಾಣೆಗೆ ತಲುಪಿಸಿ ವಿಚಾರಣೆ ನಡೆಸಿದಾಗ ಫಯಾಸ್ 2020ರಲ್ಲಿ ಬದಿಯಡ್ಕ ಪೋಲೀಸರು ದಾಖಲಿಸಿಕೊಂಡ ಗಾಂಜಾ ವಶ ಪ್ರಕರಣದಲ್ಲಿ ವಾರಂಟ್ ಆರೋಪಿಯಾಗಿದ್ದಾನೆಂದು ತಿಳಿದುಬಂದಿದೆ. ಈ ಬಗ್ಗೆ ಮಂಜೇಶ್ವರ ಪೋಲೀಸರು ನೀಡಿದ ಮಾಹಿತಿಯಂತೆ ಬದಿಯಡ್ಕ ಪೋಲೀಸರು ಮಂಜೇಶ್ವರಕ್ಕೆ ತೆರಳಿ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಶ್ರೀ ಓಂ ಮೀನಾನನ್ನು ಪೋಲೀಸರು ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.


