ಕಾಸರಗೋಡು: ಜಿಲ್ಲೆಯ 'ಗುಂಪು ಗ್ರಾಮ'ಗಳನ್ನು ವಿಭಜಿಸುವ ಬೇಡಿಕೆಯನ್ನು ಸರ್ಕಾರ ಪರಿಗಣಿಸುತ್ತಿದ್ದು, ಪ್ರಸಕ್ತ ನಡೆಯುತ್ತಿರುವ ಜನಗಣತಿಯ ಕಾರಣದಿಂದ ಇಂತಹ ವಿಭಜನೆಯು ಕಾರ್ಯಸಾಧ್ಯವಲ್ಲ ಎಂದು ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ತಿಳಿಸಿದ್ದಾರೆ.
ಅವರು ಚೆಂಗಳ ಸ್ಮಾರ್ಟ್ ಗ್ರಾಮಾಧಿಕಾರಿ ಕಚೇರಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಗ್ರಾಮ ವಿಭಜನೆಯ ಸಂದರ್ಭ ಚೆಂಗಳ ಗ್ರಾಮ ಕಚೇರಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಹೊಸ ಗ್ರಾಮ ಕಚೇರಿ ಕಟ್ಟಡವು ಸಿಬ್ಬಂದಿಯ ಅನುಕೂಲತೆ ಜತೆಗೆ, ಸಾರ್ವಜನಿಕರಿಗೆ ಅತ್ಯುತ್ತಮ ಸೇವೆಯನ್ನು ಖಚಿತಪಡಿಸಿಕೊಳ್ಳಲಾಗುವುದು. ಸರ್ಕಾರ ಎಂದಿಗೂ ಜನತೆಯ ಪರವಾಗಿರಲಿದೆ. ಭೂ ಮರು ವರ್ಗೀಕರಣ, ಭೂ ಒಡೆತನದ ಹಕ್ಕು ಪತ್ರಗಳ ವಿತರಣೆ ಸೇರಿದಂತೆ ವಿವಿಧ ಕಾರ್ಯವಿಧಾನಗಳನ್ನು ತ್ವರಿತ ಮತ್ತು ಪಾರದರ್ಶಕವಾಗಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸಏವೆ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ವರದಿ ಮಂಡಿಸಿದರು. ನಿಗದಿತ ಕಾಲಾವಧಿಯೊಳಗೆ ಚೆಂಗಳ ಗ್ರಾಮ ಕಚೇರಿ ಕಟ್ಟಡದ ನಿರ್ಮಾಣಕಾರ್ಯ ಪೂರ್ಣಗೊಳಿಸಿದ ಗುತ್ತಿಗೆದಾರ ಮನಾಫ್ ಎಡನೇರಿ ಅವರನ್ನು ಸಚಿವ ಎ.ಪಿ.ಅನಿಲ್ ಕುಮಾರ್ ಸನ್ಮಾನಿಸಿದರು.
ಭೂಕಂದಾಯ ಆಯುಕ್ತ ಎಚ್.ದಿನೇಶನ್, ಕಾಸರಗೋಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಅಬ್ದುಲ್ಲಕುಞÂ ಚೆರ್ಕಳ, ಚೆಂಗಳ ಗ್ರಾಮ ಪಂಚಾಯಿತಿ ಅಧ್ಯಕ್ಷ ವಸಂತ ಅಜಕ್ಕೋಡು, ಮಾಜಿ ಸಚಿವ ಸಿ.ಟಿ. ಅಹ್ಮದಾಅಲಿ,ಕಾಸರಗೋಡು ಜಿಪಂ ಸದಸ್ಯೆ ಜಸ್ನಾ ಮನಾಫ್, ಬ್ಲಾಕ್ ಪಂಚಾಯಿತಿ ಸದಸ್ಯೆ ವಕೀಲೆ ನಸೀಫ, ಚೆಂಗಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಾಸ್ಮಿನ್ ಕಬೀರ್, ಚೆಂಗಳ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಶುಕ್ಕೂರ್ ಚೆರ್ಕಳ, ಕಂದಾಯಾಧಿಕಾರಿಗಳು ಉಪಸ್ಥಿತರಿದ್ದರು.ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ವಿಶೇಷ ಕಾರ್ಯದರ್ಶಿ ಕೆ. ಜೀವನ್ ಬಾಬು ಐಎಎಸ್ ಸ್ವಾಗತಿಸಿದರು. ಎಡಿಎಂ ಪಿ. ಉದಯಕುಮಾರ್ ವಂದಿಸಿದರು. ರಾಜ್ಯ ಸರ್ಕಾರದ ಆರಂಭಿಕ 100 ದಿನಗಳ ಕ್ರಿಯಾ ಯೋಜನೆಯ ಅಂಗವಾಗಿ ಕಚೇರಿಯ ಉದ್ಘಾಟನೆ ನಡೆಸಲಾಗಿದೆ.



