ಮುಂಬೈ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆಯಿಂದ ಉಪವಾಸ ಸತ್ಯಾಗ್ರಹದ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರವು ಜಾರಿಗೆ ಉದ್ದೇಶಿಸಿದ್ದ ಹೊಸ ಆರ್ಟಿಐ ನಿಯಮಗಳನ್ನು ತಡೆ ಹಿಡಿದಿದೆ.
ಆರ್ಟಿಐ ಅರ್ಜಿ ಸಲ್ಲಿಕೆಗೆ ದುಬಾರಿ ಶುಲ್ಕ, ಗುರುತಿನ ಚೀಟಿ ಕಡ್ಡಾಯ ಸೇರಿದಂತೆ ಹಲವು ಬದಲಾವಣೆಗಳನ್ನೊಳಗೊಂಡ ಮಹಾರಾಷ್ಟ್ರ ಮಾಹಿತಿ ಹಕ್ಕು ನಿಯಮಗಳು 2026 ಅನ್ನು ಸರ್ಕಾರ ತಡೆಹಿಡಿದಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ಅರ್ಜಿಯಲ್ಲಿ ಒಂದು ವಿಷಯಕ್ಕೆ ಸಂಬಂಧಿಸಿದ ಮಾಹಿತಿ ಮಾತ್ರ ಕೇಳಬೇಕೆಂಬ ನಿಯಮ ಸೇರಿ ಹಲವು ನಿರ್ಬಂಧಗಳನ್ನೊಳಗೊಂಡ ಈ ಬದಲಾವಣೆಯನ್ನು ಅಣ್ಣಾ ಹಜಾರೆ ವಿರೋಧ ವ್ಯಕ್ತಪಡಿಸಿದ್ದರು. ಆರ್ಟಿಐ ನಿಯಮಗಳ ತಿದ್ದುಪಡಿ ಹಿಂಪಡೆಯದಿದ್ದರೆ ಜುಲೈ 5ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವ ಎಚ್ಚರಿಕೆ ನೀಡಿದ್ದರು.
ಈ ಸಂಬಂಧ ಹೊಸ ಆರ್ಟಿಐ ನಿಯಮಗಳ ಅಧಿಸೂಚನೆಯನ್ನು ತಡೆಹಿಡಿಯುವಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಮಾಹಿತಿ ಹಕ್ಕು ಆಯೋಗದ ಪ್ರಧಾನ ಆಯುಕ್ತರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ್ದ ಅಧಿಕೃತ ಅಧಿಸೂಚನೆಯಲ್ಲಿ ಜುಲೈ 12ರಿಂದ ಆರ್ಟಿಐನ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ತಿಳಿಸಲಾಗಿತ್ತು. ಹೊಸ ನಿಯಮಗಳ ಪ್ರಕಾರ, ಪ್ರತಿ ಆರ್ಟಿಐ ಅರ್ಜಿಗೆ ₹30 ಶುಲ್ಕ ಪಾವತಿಸಬೇಕಿತ್ತು.

