ಕೊಚ್ಚಿ: ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ವೇಳೆ ಹೃದಯಾಘಾತಕ್ಕೊಳಗಾದ ವ್ಯಕ್ತಿಯೊಬ್ಬರ ಜೀವವನ್ನು ಕೇರಳಂನ ಇಬ್ಬರು ನರ್ಸ್ ಗಳು ಸಮಯಪ್ರಜ್ಞೆಯಿಂದ ನಡೆಸಿದ CPR ಚಿಕಿತ್ಸೆಯ ಮೂಲಕ ಉಳಿಸಿದ ಘಟನೆ ಎರ್ನಾಕುಲಂ ಜಿಲ್ಲೆಯಲ್ಲಿ ನಡೆದಿದೆ.
ಅಂಗಮಾಲಿಯ ಎಲ್ಎಫ್ ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ಅಂಜಲಿ ಬೈಜು ಮತ್ತು ಬೆಂಗಳೂರಿನಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಆರ್ದ್ರಾ ರಾಜ್ ಅವರು ತುರ್ತಾಗಿ ನೆರವಿಗೆ ಬಂದವರು.
ಒಕ್ಕಲ್ ಸಮೀಪದ ತನ್ನಿಪುಳದಲ್ಲಿ ಲಾಟರಿ ಅಂಗಡಿ ನಡೆಸುತ್ತಿರುವ 43 ವರ್ಷದ ಸಿನೋಜ್ ಅವರಿಗೆ ಬುಧವಾರ ಬೆಳಿಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕುಟುಂಬ ಸದಸ್ಯರು ಅವರನ್ನು ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಕಲಾಡಿ ಸೇತುವೆ ಸಮೀಪದ ಎಂಸಿ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಇದೇ ವೇಳೆ ಸಿನೋಜ್ ಕಾರಿನೊಳಗೆ ಕುಸಿದು ಬಿದ್ದರು.
ಈ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅಂಜಲಿ ಬೈಜು ಮತ್ತು ಆರ್ದ್ರಾ ರಾಜ್ ಅವರು ರಸ್ತೆಬದಿಯಲ್ಲಿ ಉಂಟಾದ ಗದ್ದಲವನ್ನು ಗಮನಿಸಿ ತಕ್ಷಣ ಬಸ್ನಿಂದ ಇಳಿದು ಕಾರಿನ ಬಳಿಗೆ ಧಾವಿಸಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿನೋಜ್ ಅವರಿಗೆ ಅವರು ತಕ್ಷಣವೇ ಹೃದಯ-ಶ್ವಾಸಕೋಶ ಪುನರುಜ್ಜೀವನ (ಅPಖ) ಚಿಕಿತ್ಸೆ ನೀಡಲು ಆರಂಭಿಸಿದರು.
ಸಿನೋಜ್ ಅವರನ್ನು ಅಂಗಮಾಲಿಯ ಆಸ್ಪತ್ರೆಗೆ ಸಾಗಿಸುವವರೆಗೂ ಇಬ್ಬರೂ ಅPಖ ಚಿಕಿತ್ಸೆಯನ್ನು ನಿರಂತರವಾಗಿ ಮುಂದುವರಿಸಿದರು. ಆಸ್ಪತ್ರೆಗೆ ತಲುಪುವ ಹೊತ್ತಿಗೆ ಅವರಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬಂದಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.
ಪರಿಶೀಲನೆಯ ವೇಳೆ ಸಿನೋಜ್ ಅವರ ಹೃದಯಕ್ಕೆ ರಕ್ತ ಪೂರೈಸುವ ಪರಿಧಮನಿಯೊಂದರಲ್ಲಿ ಅಡಚಣೆ ಇರುವುದು ಪತ್ತೆಯಾಗಿದೆ. ಅವರಿಗೆ ತುರ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ರಕ್ಷಣಾ ಕಾರ್ಯದಲ್ಲಿ ಸ್ಥಳೀಯ ನಿವಾಸಿಗಳೂ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿನೋಜ್ ಅವರನ್ನು ತುರ್ತಾಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂಬುದನ್ನು ತಿಳಿದ ದಾರಿಹೋಕರೊಬ್ಬರು ವಾಹನ ಚಲಾಯಿಸಲು ಮುಂದಾಗಿದ್ದು, ಇತರರು ಸಂಚಾರ ದಟ್ಟಣೆಯಿಂದ ವಾಹನವನ್ನು ಹೊರತೆಗೆದು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ನೆರವಾಗಿದ್ದಾರೆ ಎಂದು ತಿಳಿದು ಬಂದಿದೆ.
ನರ್ಸ್ ಗಳಿಬ್ಬರ ಸಮಯೋಚಿತ ನೆರವು ಮತ್ತು ಸ್ಥಳೀಯರ ಸಹಕಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕರು ಅವರ ಮಾನವೀಯ ಸೇವೆ ಮತ್ತು ತ್ವರಿತ ಪ್ರತಿಕ್ರಿಯೆಯನ್ನು ಶ್ಲಾಘಿಸಿದ್ದಾರೆ.

