ಛತ್ತೀಸ್ಗಢ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಛತ್ತೀಸ್ಗಢದ ಸುಪ್ರಸಿದ್ದ ಪಾಂಡವಾನಿ ಜಾನಪದ ಗಾಯಕಿ ತೀಜನ್ ಬಾಯಿ (70) ಅವರು ಭಾನುವಾರ ರಾಯ್ಪುರದ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದ ತೀಜನ್ ಬಾಯಿ ಅವರು ಮೇ ತಿಂಗಳಿನಲ್ಲಿ ಆನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ನಿನ್ನೆ (ಜುಲೈ 4) ಬೆಳಗಿನ ಜಾವ 3.15ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಏಮ್ಸ್ನ ವೈದ್ಯರು ಪಿಟಿಐಗೆ ತಿಳಿಸಿದ್ದಾರೆ.
ಛತ್ತೀಸ್ಗಢದ ಸಾಂಪ್ರದಾಯಿಕ ಜಾನಪದ ಕಲಾ ಪ್ರಕಾರವಾದ ಪಾಂಡವಾನಿಯ ಪ್ರಮುಖ ಗಾಯಕಿಯಾಗಿ ತೀಜನ್ ಬಾಯಿ ಗುರುತಿಸಿಕೊಂಡಿದ್ದರು. ಮಹಾಭಾರತದ ಪ್ರಸಂಗಗಳನ್ನು ಕಥೆ ಮತ್ತು ಗಾಯನದಲ್ಲಿ ಹಾಡುತ್ತಿದ್ದರು. ತಮ್ಮ ಮಧುರ ಕಂಠ ಮತ್ತು ಅಭಿವ್ಯಕ್ತಿಶೀಲ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದರು.
ತೀಜನ್ 1956ರ ಆಗಸ್ಟ್ 8 ರಂದು ಜನಿಸಿದ್ದರು. ಜಾನಪದ ಗಾಯನ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆ ಗುರುತಿಸಿದ ಭಾರತ ಸರ್ಕಾರವು ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂತಾಪ ಸೂಚಿಸಿದ್ದು, 'ಪ್ರಸಿದ್ಧ ಪಾಂಡವಾನಿ ಗಾಯಕಿ ತೀಜನ್ ಬಾಯಿ ಜಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಅವರು ತಮ್ಮ ಅದ್ಭುತ ಗಾಯನದ ಮೂಲಕ ಛತ್ತೀಸ್ಗಢದ ಜಾನಪದ ಕಲೆಗೆ ಜಾಗತಿಕ ಮನ್ನಣೆ ಸಿಗುವಂತೆ ಮಾಡಿದವರು. ಅವರ ನಿಧನವು ಕಲೆ ಮತ್ತು ಸಂಸ್ಕೃತಿ ಜಗತ್ತಿಗೆ ತುಂಬಲಾರದ ನಷ್ಟ.ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಿಲಿ' ಎಂದು ಸಂತಾಪ ಸೂಚಿಸಿದ್ದಾರೆ.

