ನವದೆಹಲಿ: ದಿವಂಗತ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮಿನೈ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿರುವುದಕ್ಕಾಗಿ ಇರಾನ್ ಸೋಮವಾರ ಭಾರತಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ. ಭಾರತದ ಈ ಕ್ರಮವು ಉಭಯ ದೇಶಗಳ ನಡುವಿನ ಸುದೀರ್ಘ ಬಾಂಧವ್ಯದ ಅಮೂಲ್ಯ ಸಾಕ್ಷಿಯಾಗಿದೆ ಎಂದು ಬಣ್ಣಿಸಿರುವ ಇರಾನ್, ಹೊಸದಿಲ್ಲಿ ನೀಡಿರುವ ಈ ಬೆಂಬಲವನ್ನು ಇರಾನ್ ಜನತೆ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದೆ.
ಭಾರತ ಸರಕಾರದ ಪರವಾಗಿ ಬಿಹಾರದ ರಾಜ್ಯಪಾಲ ಸೈಯದ್ ಅತ್ತಾ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಪಬಿತ್ರ ಮಾರ್ಗರಿಟಾ ಅವರು ಜುಲೈ 3 ರಂದು ನಡೆದ ದಿವಂಗತ ಸರ್ವೋಚ್ಚ ನಾಯಕನ ಅಂತಿಮ ಯಾತ್ರೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಕೂಡ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದ್ದಾರೆ.
ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿರುವ ವೈಮಾನಿಕ ದಾಳಿಯಲ್ಲಿ ಹತರಾದ ಖಾಮಿನೈ ಅವರಿಗೆ ಗೌರವ ಸಲ್ಲಿಸಿರುವುದಕ್ಕಾಗಿ ಭಾರತ ಸರಕಾರಕ್ಕೆ ಇರಾನ್ ರಾಯಭಾರ ಕಚೇರಿಯು 'ಎಕ್ಸ್' ನಲ್ಲಿ ಹಾಕಿದ ಹೇಳಿಕೆಯಲ್ಲಿ ತನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದೆ.
''ಇರಾನ್ನ ಜನತೆ ಈ ಸ್ನೇಹ, ಸಹಾನುಭೂತಿ ಮತ್ತು ಹೃತ್ಪೂರ್ವಕ ಗೌರವವನ್ನು ಎಂದಿಗೂ ಮರೆಯುವುದಿಲ್ಲ'' ಎಂದು ರಾಯಭಾರ ಕಚೇರಿ ತಿಳಿಸಿದೆ. ಅಂತ್ಯಸಂಸ್ಕಾರದಲ್ಲಿ ಭಾರತದ ಉಪಸ್ಥಿತಿಯನ್ನು ಉಭಯ ದೇಶಗಳ ನಡುವಿನ ಸುದೀರ್ಘ ಬಾಂಧವ್ಯದ ಅಮೂಲ್ಯ ಸಾಕ್ಷಿ ಹಾಗೂ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಬುನಾದಿ ಎಂದು ತಾನು ಪರಿಗಣಿಸುವುದಾಗಿ ಅದು ಹೇಳಿದೆ.

