ನವದೆಹಲಿ: ಭಾರತೀಯ ಭೂಸೇನೆಯ 31ನೇ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರು ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ಭಾರತೀಯ ಸೇನೆಯನ್ನು ತಂತ್ರಜ್ಞಾನ ಆಧಾರಿತ ಹಾಗೂ ಭವಿಷ್ಯದ ಸವಾಲುಗಳಿಗೆ ಸಜ್ಜಾದ ಪಡೆಯನ್ನಾಗಿ ಆಧುನೀಕರಿಸಲಾಗುವುದು ಎಂದು ಭರವಸೆ ನೀಡಿದ ಧೀರಜ್, ಜಾಗರೂಕತೆ, ನಾವೀನ್ಯತೆ, ಜಂಟಿ ಕಾರ್ಯಾಚರಣೆ, ಸ್ವಾವಲಂಬನೆ ಮತ್ತು ಸೈನಿಕರಿಗೆ ಆದ್ಯತೆ ನೀಡುವುದನ್ನು ಒಳಗೊಂಡ ತಮ್ಮ ಕಾರ್ಯತಂತ್ರದ ದೃಷ್ಟಿಕೋನವನ್ನು ವಿವರಿಸಿದ್ದಾರೆ.
ಭಾರತೀಯ ಸೇನೆಯನ್ನು ಮುನ್ನಡೆಸುವುದು ನನಗೆ ಹೆಮ್ಮೆ ಮತ್ತು ನಮ್ರತೆಯ ವಿಷಯವಾಗಿದೆ. ಕರ್ತವ್ಯ, ಗೌರವ ಮತ್ತು ಮೊದಲು ದೇಶ ಎಂಬ ಆದರ್ಶಗಳ ಕುರಿತು ಬದ್ಧತೆ ಹೊಂದಿರುವುದಾಗಿ ಧೀರಜ್ ಪುನರುಚ್ಚರಿಸಿದ್ದಾರೆ.
'ಸಶಸ್ತ್ರ ಪಡೆಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರೂಪಿಸಿದ 'ವಿಜಯ್' ಮಾರ್ಗದರ್ಶಿ ತತ್ವವು ಭಾರತದ ಯಶಸ್ಸಿನ ತಳಹದಿಯಾಗಿದೆ. ಇದು ನಮ್ಮನ್ನು ಖಂಡಿತವಾಗಿಯೂ ವಿಜಯದತ್ತ ಮುನ್ನಡೆಸುತ್ತದೆ ಎಂದು ನಂಬುತ್ತೇನೆ. ಈ ದೃಷ್ಟಿಕೋನವನ್ನು ಪ್ರೋತ್ಸಾಹಿಸುವುದು ನನ್ನ ಸೌಭಾಗ್ಯವಾಗಿದೆ. 'ಜೈ' ಎಂಬುದು 'ವಿಜಯ'ಕ್ಕೆ ದಾರಿಯಾಗುತ್ತದೆ' ಎಂದು ಅವರು ಹೇಳಿದ್ದಾರೆ.
ದೇಶದ ಸೇವೆಗಾಗಿ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ನಮನ ಸಲ್ಲಿಸಿದ ಅವರು, ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
'ಭದ್ರತಾ ಸವಾಲುಗಳನ್ನು ಎದುರಿಸಲು ನಾವು ಹೊಸ ಹುರುಪು ಮತ್ತು ದೃಢ ಸಂಕಲ್ಪದೊಂದಿಗೆ ಸೇನೆಯ ಆಧುನೀಕರಣವನ್ನು ಮುನ್ನಡೆಸಬೇಕು. ನಮ್ಮ ಉದ್ದೇಶವು ತಂತ್ರಜ್ಞಾನ ಆಧಾರಿತ, ಭವಿಷ್ಯದ ಸವಾಲುಗಳಿಗೆ ಸಿದ್ಧವಿರುವ ಮತ್ತು ಎಲ್ಲಾ ರಂಗಗಳಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿರುವ ಸಶಕ್ತ ಸೇನೆಯನ್ನು ನಿರ್ಮಿಸುವುದಾಗಿದೆ' ಎಂದಿದ್ದಾರೆ.
ಇದೇ ವೇಳೆ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಇಂದು ವಾಯುಪಡೆಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ನಾಲ್ಕು ದಶಕಗಳ ಅನುಭವ...
ಭಾರತೀಯ ಭೂಸೇನೆಯಲ್ಲಿ ಧೀರಜ್ ಸೇಠ್ ಅವರಿಗೆ ನಾಲ್ಕು ದಶಕಗಳ ಅನುಭವ ಇದೆ. ಕಾರ್ಯಾಚರಣೆ, ಕಾರ್ಯತಂತ್ರ, ಸಾಮರ್ಥ್ಯ ಅಭಿವೃದ್ಧಿ ಮತ್ತು ಸಾಂಸ್ಥಿಕ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ರಾಷ್ಟ್ರೀಯ ಭದ್ರತಾ ಅಕಾಡೆಮಿಯಲ್ಲಿ ಸೇನಾಧಿಕಾರಿ ತರಬೇತಿ ಮುಗಿಸಿದ್ದ ಧೀರಜ್ ಸೇಠ್ ಅವರು, 1986ರಲ್ಲಿ ಸೇನಾ ಸಶಸ್ತ್ರ ಪಡೆಗೆ ಸೇರ್ಪಡೆ ಆಗಿದ್ದರು.
ಸೇನೆಯಲ್ಲಿ ಆಧುನೀಕರಣ ಮತ್ತು ಕಾರ್ಯತಂತ್ರ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜಮ್ಮು-ಕಾಶ್ಮೀರದಲ್ಲಿ ಒಳನುಸುಳುಕೋರರ ನಿಗ್ರಹ ಪಡೆ, ಸುದರ್ಶನ ಚಕ್ರ ತಂಡ ಸೇರಿ ಹಲವು ತಂಡಗಳನ್ನು ಮುನ್ನಡೆಸಿದ್ದಾರೆ. ದೆಹಲಿಯಲ್ಲಿ ಪ್ರಧಾನ ಕಮಾಂಡಿಂಗ್ ಅಧಿಕಾರಿಯಾಗಿ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಸೇನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಸೇನಾ ಕಮಾಂಡರ್ ಆಗಿ ಪದೋನ್ನತಿ ಪಡೆದಿದ್ದ ಅವರು, ಪ್ರಮುಖ ಕಾರ್ಯಾಚರಣೆಗಳ ಭಾಗವಾಗಿದ್ದರು. ಸಿಬ್ಬಂದಿ ಮತ್ತು ಕಾರ್ಯತಂತ್ರದ ಹಲವು ಉನ್ನತ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಎರಡೂವರೆ ವರ್ಷಗಳವರೆಗೆ ಅತ್ಯಂತ ಕಠಿಣ ಸಂದರ್ಭಗಳಲ್ಲಿ ಸೇನಾ ಕಾರ್ಯತಂತ್ರ ನಿರ್ವಹಣೆಯ ಜವಾಬ್ದಾರಿ ನಿಭಾಯಿಸಿದ್ದರು.

