ಅಯೋಧ್ಯಾ: ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಟ್ರಸ್ಟ್ನ ಖಾಯಂ ಸದಸ್ಯ, ಐಎಫ್ಎಸ್ ನಿವೃತ್ತ ಅಧಿಕಾರಿ ಕೃಷ್ಣ ಮೋಹನ್ ಅವರನ್ನು ನೇಮಕ ಮಾಡಲಾಗಿದೆ.
ರಾಮಮಂದಿರದ ದೇಣಿಗೆ ಕಳವು ಆರೋಪಗಳು ಕೇಳಿಬಂದ ನಂತರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.
ಸೋಮವಾರ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ನಡೆದ 3 ಗಂಟೆಗಳ ಸುದೀರ್ಘ ಸಭೆಯಲ್ಲಿ ಇವರ ರಾಜೀನಾಮೆಯನ್ನು ಅಂಗೀಕರಿಸಿ, ಕೃಷ್ಣ ಮೋಹನ್ ಅವರಿಗೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ.
ಯಾರು ಈ ಕೃಷ್ಣ ಮೋಹನ್?
73 ವರ್ಷದ ಕೃಷ್ಣ ಮೋಹನ್ ಅವರು ಭಾರತೀಯ ಅರಣ್ಯ ಸೇವೆ (ಐಎಫ್ಎಸ್ ) ನಿವೃತ್ತ ಅಧಿಕಾರಿಯಾಗಿದ್ದಾರೆ. ಇವರು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯವರು.
ಪ್ರಸ್ತುತ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಖಾಯಂ ಸದಸ್ಯರಾಗಿದ್ದಾರೆ. ಟ್ರಸ್ಟ್ನ ಖಾಯಂ ಸದಸ್ಯರಾಗಿದ್ದ ಕಾಮೇಶ್ವರ್ ಚೌಪಾಲ್ ಅವರ ನಿಧನದ ನಂತರ 2025ರ ಸೆಪ್ಟೆಂಬರ್ನಲ್ಲಿ ಇವರನ್ನು ಟ್ರಸ್ಟ್ನ ಖಾಯಂ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಅಂದಿನಿಂದ ಅವರು ಟ್ರಸ್ಟ್ನ ಆಡಳಿತಾತ್ಮಕ ವ್ಯವಹಾರಗಳಲ್ಲಿ ಸಕ್ರಿಯರಾಗಿದ್ದಾರೆ.
ಲೋಪದೋಷ ಸರಿಪಡಿಸುವುದೇ ನನ್ನ ಮೊದಲ ಆದ್ಯತೆ
ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷ್ಣ ಮೋಹನ್, ತಮಗೆ ವಹಿಸಿರುವ ಜವಾಬ್ದಾರಿಯನ್ನು ಕಟ್ಟುನಿಟ್ಟಾಗಿ ನಿಭಾಯಿಸುವುದಾಗಿ ಹೇಳಿದ್ದಾರೆ.
ನಡೆದಿರುವ ಘಟನೆಗಳಿಂದ ರಾಮ ಭಕ್ತರು ಸೇರಿದಂತೆ ನಮಗೆಲ್ಲರಿಗೂ ತೀವ್ರ ನೋವಾಗಿದೆ. ಮಂದಿರದ ಆಡಳಿತ ಮತ್ತು ಹಣದ ನಿರ್ವಹಣೆಯಲ್ಲಿ ಕೆಲವು ಲೋಪದೋಷಗಳಿದ್ದವು, ಅದನ್ನು ಇತರರು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಲೋಪದೋಷಗಳನ್ನು ಸರಿಪಡಿಸುವುದು ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ತಡೆಯುವುದೇ ನನ್ನ ಮೊದಲ ಆದ್ಯತೆ ಎಂದಿದ್ದಾರೆ.
ದೇಣಿಗೆ ದುರುಪಯೋಗ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೋ, ಅವರೆಲ್ಲರ ವಿರುದ್ಧ ಕಾನೂನು ಕ್ರಮ ಕಯಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಘಟನೆಯಿಂದ ಟ್ರಸ್ಟ್ನ ಹೆಸರಿಗೆ ಸ್ವಲ್ಪ ಧಕ್ಕೆಯಾಗಿದ್ದು, ಜನರಲ್ಲಿ ಅಪನಂಬಿಕೆ ಭಾವನೆ ಮೂಡಿದೆ. ಈ ನಕಾರಾತ್ಮಕ ಭಾವನೆಯನ್ನು ತೊಡೆದುಹಾಕಿ, ಜನರ ವಿಶ್ವಾಸವನ್ನು ಗಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದೂ ನುಡಿದಿದ್ದಾರೆ.
ಇನ್ನು ಚಂಪತ್ ರಾಯ್ ಅವರ ರಾಜೀನಾಮೆ ಅಂಗೀಕಾರವಾಗಿದ್ದರೂ, ಅವರು ಟ್ರಸ್ಟಿಯಾಗಿ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

