ಇಸ್ಲಾಮಾಬಾದ್: ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹತರಾದ ಇರಾನ್ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸೀಂ ಮುನೀರ್ ಅವರು ಇಂದು(ಶುಕ್ರವಾರ) ಟೆಹರಾನ್ ತಲುಪಿದ್ದಾರೆ.
ಷರೀಫ್ ಅವರೊಂದಿಗೆ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಯಾಜ್ ಸಾದಿಕ್, ವಿದೇಶಾಂಗ ಸಚಿವ ಇಶಾಕ್ ದಾರ್, ಮಾಹಿತಿ ಸಚಿವ ಅತ್ತಾವುಲ್ಲಾ ತರಾರ್, ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಮತ್ತು ಸಿಂಧ್ ಮುಖ್ಯಮಂತ್ರಿ ಮುರಾದ್ ಅಲಿ ಅವರು ಇರಾನ್ಗೆ ಪ್ರಯಾಣ ಬೆಳೆಸಿದ್ದಾರೆ.
ಷರೀಫ್ ಅವರ ಆಗಮನಕ್ಕೂ ಮುನ್ನವೇ ಮುನೀರ್ ಅವರು ಟೆಹರಾನ್ಗೆ ಬಂದಿಳಿದಿದ್ದು, ಅಲ್ಲಿ ಅವರಿಗೆ ಇರಾನ್ನ ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳು ಹಾಗೂ ಪಾಕಿಸ್ತಾನ ರಾಯಭಾರ ಕಚೇರಿಯ ಅಧಿಕಾರಿಗಳು ಸ್ವಾಗತ ಕೋರಿದ್ದಾರೆ.
ಸೆನೆಟ್ ಅಧ್ಯಕ್ಷ ಯೂಸುಫ್ ರಜಾ ಗಿಲಾನಿ, ಗೃಹ ಸಚಿವ ಮೊಹ್ಸಿನ್ ನಖ್ವಿ ಮತ್ತು ಇತರ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಅಂತ್ಯಕ್ರಿಯೆಯ ವಿಧಿವಿಧಾನಗಳು ಜುಲೈ 5, 6 ಮತ್ತು 7 ರಂದು ಟೆಹರಾನ್ ಮತ್ತು ಕೋಮ್ನಲ್ಲಿ ನಡೆಯಲಿವೆ. ಜುಲೈ 9 ರಂದು ಮಶಾದ್ ನಗರದಲ್ಲಿ ದಫನ ಪ್ರಕ್ರಿಯೆ ನಡೆಯಲಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಮಾತುಕತೆಯಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆಗಾರನಾಗಿ ಕೆಲಸ ಮಾಡಿತ್ತು. ಜೂನ್ 18ರಂದು ಉಭಯ ದೇಶಗಳು ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿದ್ದು, ಮುಂದಿನ 60 ದಿನಗಳಲ್ಲಿ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಲು ಒಪ್ಪಿಕೊಂಡಿವೆ.

