ಕೆಲವು ದಿನಗಳ ಹಿಂದೆ, ತುರ್ತು ವಿಚಾರಣೆಗೆ ಪ್ರಕರಣಗಳನ್ನು ಪ್ರಸ್ತಾಪಿಸುವುದು ನ್ಯಾಯಾಂಗ ವಿಚಾರಣೆಯ ಭಾಗವಲ್ಲ; ಅದು ಪ್ರಕರಣಗಳನ್ನು ಪಟ್ಟಿಗೆ ಸೇರಿಸುವ ಆಡಳಿತಾತ್ಮಕ ಪ್ರಕ್ರಿಯೆ ಮಾತ್ರ. ಆದ್ದರಿಂದ ಆ ವೇಳೆ ನಡೆಯುವ ಸಂವಾದಗಳನ್ನು ನ್ಯಾಯಾಂಗ ಪ್ರಕ್ರಿಯೆಯಂತೆ ವರದಿ ಮಾಡಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದರು. ಬುಧವಾರದ ಆದೇಶವು ಇದೇ ನಿಲುವನ್ನು ಜಾರಿಗೆ ತಂದಿದೆ.
ಸಾಮಾನ್ಯವಾಗಿ ವಕೀಲರು ತಕ್ಷಣ ನ್ಯಾಯಾಲಯದ ಗಮನ ಅಗತ್ಯವಿರುವ ಪ್ರಕರಣಗಳನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಪ್ರಸ್ತಾಪಿಸಿ, ಶೀಘ್ರ ವಿಚಾರಣೆಗೆ ಪಟ್ಟಿಗೆ ಸೇರಿಸುವಂತೆ ಮನವಿ ಮಾಡುತ್ತಾರೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (PIL), ರಾಜಕೀಯವಾಗಿ ಸೂಕ್ಷ್ಮ ಪ್ರಕರಣಗಳು ಹಾಗೂ ಸಾಂವಿಧಾನಿಕ ಮಹತ್ವದ ವಿಷಯಗಳು ಹೆಚ್ಚಾಗಿ ಇದೇ ಹಂತದಲ್ಲಿ ಪ್ರಸ್ತಾಪವಾಗುತ್ತವೆ.
ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವು ತುರ್ತು ವಿಚಾರಣೆಗೆ ಅರ್ಹವೇ ಎಂಬುದನ್ನು ಪರಿಶೀಲಿಸಿ, ವಿಚಾರಣೆಗೆ ದಿನಾಂಕ ನಿಗದಿಪಡಿಸಬೇಕೆ ಅಥವಾ ತಕ್ಷಣ ಪಟ್ಟಿಗೆ ಸೇರಿಸಬೇಕೆ ಎಂಬ ಬಗ್ಗೆ ಮೌಖಿಕವಾಗಿ ಸೂಚನೆ ನೀಡುತ್ತಾರೆ.
ಇತ್ತೀಚಿನ ತಿಂಗಳುಗಳಲ್ಲಿ ರಾಜಕೀಯವಾಗಿ ಮಹತ್ವದ ಹಲವು ಪ್ರಕರಣಗಳು ಹಾಗೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಪ್ರಸ್ತಾಪದ ವೇಳೆ ಮುಖ್ಯ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದ ಮೌಖಿಕ ಅಭಿಪ್ರಾಯಗಳನ್ನು ಮಾಧ್ಯಮಗಳು ವ್ಯಾಪಕವಾಗಿ ವರದಿ ಮಾಡಿದ್ದವು. ಕೆಲವು ಸಂದರ್ಭಗಳಲ್ಲಿ ಪ್ರಕರಣಗಳ ಅಧಿಕೃತ ವಿಚಾರಣೆ ಆರಂಭವಾಗುವ ಮೊದಲೇ ಈ ವರದಿಗಳು ಸಾರ್ವಜನಿಕರ ಗಮನ ಸೆಳೆದಿದ್ದವು.
ಹೊಸ ಆದೇಶದಂತೆ, ತುರ್ತು ವಿಚಾರಣೆಗೆ ಪ್ರಕರಣಗಳನ್ನು ಪ್ರಸ್ತಾಪಿಸುವ ವೇಳೆ ಲೈವ್ ವಿಡಿಯೊ ಪ್ರಸಾರ ಮುಂದುವರಿದರೂ ಅದರ ಆಡಿಯೊ ಇರುವುದಿಲ್ಲ. ಹೀಗಾಗಿ, ಪ್ರಕರಣಗಳ ಪಟ್ಟಿಯನ್ನು ನಿರ್ಧರಿಸುವ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ನಡೆಯುವ ಮೌಖಿಕ ಸಂವಾದಗಳು ಸಾರ್ವಜನಿಕರಿಗೆ ಕೇಳಿಸುವುದಿಲ್ಲ.
ಈ ಕುರಿತು ಸುಪ್ರೀಂ ಕೋರ್ಟ್ ಪ್ರತ್ಯೇಕ ವಿವರಣೆ ನೀಡಿಲ್ಲ. ಆದರೆ, ಆಡಳಿತಾತ್ಮಕ ಪ್ರಕ್ರಿಯೆಯ ವೇಳೆ ನಡೆಯುವ ಸಂವಾದಗಳನ್ನು ವರದಿ ಮಾಡಬಹುದಾದ ನ್ಯಾಯಾಂಗ ಪ್ರಕ್ರಿಯೆಯ ಭಾಗವೆಂದು ಪರಿಗಣಿಸಬಾರದು ಎಂಬ ಭಾರತದ ಮುಖ್ಯ ನ್ಯಾಯಮೂರ್ತಿಗಳ ಇತ್ತೀಚಿನ ನಿಲುವಿಗೆ ಅನುಗುಣವಾಗಿಯೇ ಈ ಕ್ರಮ ಕೈಗೊಳ್ಳಲಾಗಿದೆ.

