ಮಂಜೇಶ್ವರ: ಪ್ರಸಕ್ತ ಶೈಕ್ಷಣಿಕ ವರ್ಷದ ವಾಚನಾ ಸಪ್ತಾಹದ ಸಮಾರೋಪ ಹಾಗೂ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನಾ ಸಮಾರಂಭ ಮೀಯಪದವು ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಶಾಲಾ ಪ್ರಬಂಧಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಉದ್ಘಾಟಿಸಿದರು. ಓದು ವ್ಯಕ್ತಿತ್ವದ ಆರೋಗ್ಯಕರ ಬೆಳವಣಿಗೆ ಸಹಕಾರಿ. ಓದು ವಾಚನ ಸಪ್ತಾಹಗಳಿಗೆ ಸೀಮಿತವಾಗದೆ ಬದುಕಿನ ಉದ್ದಗಲಕ್ಕೂ ಒಡನಾಡಿಯಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಶಿಕ್ಷಕ ಹಾಗೂ ಖ್ಯಾತ ಜಾದೂಗಾರ ವಾಸುದೇವ ಕೋಟೂರು (ವಾ.ಕೋ )ಅವರು ಮಾತನಾಡಿ, ಓದು ಮನುಷ್ಯನ ಅತ್ಯುತ್ತಮ ಜತೆಗಾರ. ಧೈರ್ಯ ಸೇರಿದಂತೆ ಅನೇಕ ಮೌಲ್ಯಗಳು ಬೆಳೆಯಲು ಓದು ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಶಿಕ್ಷಕಿ ಮೃದುಲ ಶುಭ ಹಾರೈಸಿದರು. ಅಧ್ಯಾಪಕ ಪ್ರಭಾಕರ ಎಸ್ ಸ್ವಾಗತಿಸಿ, ಸಾವಿತ್ರಿ ವಂದಿಸಿದರು. ಸುಧಾ ಕೆ.ಯಂ ನಿರೂಪಿಸಿದರು.
ವಾಚನಾ ಸಪ್ತಾಹದ ಅಂಗವಾಗಿ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಿಂದ ಮೂಡಿಬಂದ ಜಾದೂ ಪ್ರದರ್ಶನ ಮಕ್ಕಳನ್ನು ರಂಜಿಸಿತು.



