ಲಕ್ನೋ: ಅಯೋಧ್ಯೆಯ ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪದ ನಡುವೆ 'ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ʼ ಅನ್ನು ಆರ್ಟಿಐ ಕಾಯ್ದೆಯ ವ್ಯಾಪ್ತಿಗೆ ತರುವಂತೆ ಕೋರಿ ಸಿಪಿಐ (ಎಂ)ನ ರಾಜ್ಯ ಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಭಾನುವಾರ 'ಎಕ್ಸ್' ಮೂಲಕ ಈ ಪತ್ರ ಹಂಚಿಕೊಂಡಿರುವ ಬ್ರಿಟ್ಟಾಸ್, ಸರಕಾರ ಈ ಟ್ರಸ್ಟ್ ಅನ್ನು ''ಸ್ವಾಯತ್ತ'' ಸಂಸ್ಥೆ ಎಂದು ಕರೆದು ಆರ್ಟಿಐ ಕಾಯ್ದೆಯ ವ್ಯಾಪ್ತಿಯಿಂದ ಹೊರಗಿಡುವುದು ಸರಿಯಲ್ಲ. ಏಕೆಂದರೆ ಈ ಟ್ರಸ್ಟ್ ಅನ್ನು ಸರಕಾರದ ಅನುಮೋದಿತ ಯೋಜನೆಯಡಿ ರೂಪಿಸಲಾಗಿದೆ. ಸಂಸತ್ತಿನ ಕಾಯ್ದೆಯಡಿ ಸ್ವಾಧೀನ ಪಡಿಸಿಕೊಂಡ ಭೂಮಿ ನೀಡಲಾಗಿದೆ. ಪ್ರಸ್ತುತ ಸೇವೆಯಲ್ಲಿರುವ ಐಎಎಸ್ ಅಧಿಕಾರಿಗಳು ಇದರ ಆಡಳಿತ ಮಂಡಳಿಯಲ್ಲಿದ್ದಾರೆ ಎಂದಿದ್ದಾರೆ.
ಕೆಲವು ಟ್ರಸ್ಟ್ಗಳ ಮೇಲೆ ಸಾರ್ವಜನಿಕರಿಗೆ ಅಪಾರ ವಿಶ್ವಾಸ ಇರುತ್ತದೆ. ಅಂತಹ ಸಂಸ್ಥೆಗಳು ಸಾರ್ವಜನಿಕ ಪಾರದರ್ಶಕತೆ ಮತ್ತು ಜವಾಬ್ದಾರಿಯ ಉನ್ನತ ನಿಯಮಗಳನ್ನು ಪಾಲಿಸಬೇಕು ಎಂದು ಅವರು ಹೇಳಿದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಆರ್ಟಿಐ ಕಾಯ್ದೆಯಡಿ ''ಸರಕಾರಿ ಪ್ರಾಧಿಕಾರ''ಅಲ್ಲ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ) 2025 ಜೂನ್ 6ರಂದು ಹೇಳಿತ್ತು. ಈ ಆದೇಶ ಮುಖ್ಯವಾಗಿ ಕೇಂದ್ರ ಗೃಹ ಸಚಿವಾಲಯ ತಳೆದಿದ್ದ ನಿಲುವನ್ನು ಆಧರಿಸಿದೆ. ಆದ್ದರಿಂದ ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಹಿತದೃಷ್ಟಿಯಿಂದ ಸಚಿವಾಲಯ ತನ್ನ ನಿಲುವನ್ನು ಪರಿಶೀಲಿಸಬೇಕು ಎಂದು ಬ್ರಿಟ್ಟಾಸ್ ವಿನಂತಿಸಿದ್ದಾರೆ.

