ನವದೆಹಲಿ: ಭಾರತದ ಆರ್ಥಿಕತೆಯು 3.92 ಲಕ್ಷ ಕೋಟಿ ಡಾಲರ್ (ಸುಮಾರು 285.63 ಲಕ್ಷ ಕೋಟಿ ರೂ.) ಜಿಡಿಪಿಯೊಂದಿಗೆ ಜಾಗತಿಕವಾಗಿ ಆರನೇ ಸ್ಥಾನಕ್ಕೆ ಕುಸಿದಿದೆ ಎಂದು ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿಯವರು ಮಂಗಳವಾರ ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ ಎಂದು tribuneindia.com ವರದಿ ಮಾಡಿದೆ.
ಚೌಧರಿಯವರ ಪ್ರಕಾರ, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಎಪ್ರಿಲ್ 2026ರ ವಿಶ್ವ ಆರ್ಥಿಕ ಮುನ್ನೋಟವು ಭಾರತದ ನಾಮಮಾತ್ರ ಒಟ್ಟು ದೇಶೀಯ ಉತ್ಪನ್ನವನ್ನು (ಜಿಡಿಪಿ) 2025-2026 ರಲ್ಲಿ 3.92 ಲಕ್ಷ ಕೋಟಿ ಅಮೆರಿಕನ್ ಡಾಲರ್ಗಳೆಂದು ಅಂದಾಜಿಸಿದ್ದು, ತನ್ಮೂಲಕ ವಿಶ್ವದ ಆರನೇ ಅತಿ ದೊಡ್ಡ ಆರ್ಥಿಕತೆಯಾಗಿದೆ.
ಪ್ರಸ್ತುತ ಡಾಲರ್ ವಿನಿಮಯ ದರದಲ್ಲಿ ಲೆಕ್ಕಹಾಕಲಾದ ನಾಮಮಾತ್ರದ ಜಿಡಿಪಿಯು ಐಎಎಫ್ ರೇಟಿಂಗ್ಗೆ ಆಧಾರವಾಗಿದೆ ಎಂದು ಚೌಧರಿ ಹೇಳಿದರು.
ಇತರ ಪ್ರಮುಖ ಆರ್ಥಿಕತೆಗಳ ಗಾತ್ರ ಮತ್ತು ಬೆಳವಣಿಗೆಯಲ್ಲಿನ ಬದಲಾವಣೆಗಳು,ವಿನಿಮಯ ದರಗಳು ಮತ್ತು ಬೆಲೆಗಳಲ್ಲಿಯ ಬದಲಾವಣೆಗಳು,ರಾಷ್ಟ್ರೀಯ ಲೆಕ್ಕಪತ್ರಗಳಲ್ಲಿಯ ಬದಲಾವಣೆಗಳು ಮತ್ತು ಆರ್ಥಿಕ ಬೆಳವಣಿಗೆಯಂತಹ ವಿವಿಧ ಅಂಶಗಳು ಆರ್ಥಿಕತೆಗಳ ತುಲನಾತ್ಮಕ ಶ್ರೇಯಾಂಕವನ್ನು ಬದಲಿಸುತ್ತವೆ ಎಂದು ಅವರು ಒತ್ತಿ ಹೇಳಿದರು.
ಸೆಪ್ಟೆಂಬರ್ 2022 ರಲ್ಲಿ ಭಾರತದ ಆರ್ಥಿಕತೆಯು ನಾಮಮಾತ್ರದ ಜಿಡಿಪಿಯಲ್ಲಿ ಜಾಗತಿಕವಾಗಿ ಐದನೇ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ಬ್ರಿಟನ್ನ್ನು ಹಿಂದಿಕ್ಕಿತ್ತು. ಡಿಸೆಂಬರ್ 30,2025 ರಂದು ಪ್ರಕಟವಾದ ಸರಕಾರದ ವರ್ಷಾಂತ್ಯದ ಆರ್ಥಿಕ ಪುನರ್ಪರಿಶೀಲನೆಯ ಪ್ರಕಾರ ಭಾರತವು ಸುಮಾರು 4.18 ಲಕ್ಷ ಕೋಟಿ ಡಾಲರ್ ಜಿಡಿಪಿಯೊಂದಿಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿತ್ತು.
ಆದರೆ ಈಗ ಐಎಂಎಫ್ನ ಎಪ್ರಿಲ್ 2026ರ ಮುನ್ನಂದಾಜುಗಳ ಪ್ರಕಾರ ಜಪಾನ್ ಮತ್ತು ಬ್ರಿಟನ್ ಭಾರತಕ್ಕಿಂತ ಮುಂದಿರುವುದರಿಂದ,ದೇಶವು 2025-202ನೇ ಸಾಲಿನಲ್ಲಿ ಆರನೇ ಸ್ಥಾನದಲ್ಲಿದೆ.
ಭಾರತದ ಬೆಳವಣಿಗೆ ಸಾಮರ್ಥ್ಯವನ್ನು ಹೆಚ್ಚಿಸಲು ಸರಕಾರದ ಸಮಗ್ರ ಯೋಜನೆಯು ತಯಾರಿಕೆ,ಕೃಷಿ,ಮೂಲಸೌಕರ್ಯ ಹಾಗೂ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ಮೇಲೆ ಗಮನವನ್ನು ಕೇಂದ್ರೀಕರಿಸಿದೆ.
ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಗಳು,ಗುಣಮಟ್ಟ ನಿಯಂತ್ರಣ ಆದೇಶಗಳನ್ನು ಸರಳಗೊಳಿಸುವುದು,ಕೃಷಿ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಮೂಲಸೌಕರ್ಯ ವಿಸ್ತರಣೆ ಮುಂತಾದವು ಸರಕಾರವು ಕೈಗೊಂಡಿರುವ ಕೆಲವು ಕ್ರಮಗಳಾಗಿವೆ. ಪಿಎಂ ಗತಿ ಶಕ್ತಿ ಮತ್ತು ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯ ಮೂಲಕ ನವೀನತೆ,ಡಿಜಿಟಲೀಕರಣ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ಜೊತೆಗೆ ಸರಕು ಸಾಗಣೆಯ ದಕ್ಷತೆಯನ್ನು ಹೆಚ್ಚಿಸಲು ಸರಕಾರವು ಶ್ರಮಿಸುತ್ತಿರುವುದನ್ನು ಚೌಧರಿ ಪ್ರಮುಖವಾಗಿ ಬಿಂಬಿಸಿದರು.
ಅಲ್ಲದೆ ಸಾರ್ವಜನಿಕ ಬಂಡವಾಳ ವೆಚ್ಚಗಳು,ಉದಾರೀಕೃತ ವಿದೇಶಿ ನೇರ ಹೂಡಿಕೆ ವಾತಾವರಣ ಮತ್ತು ನೇರ ತೆರಿಗೆ ಹಾಗೂ ಜಿಎಸ್ಟಿಯಲ್ಲಿ ಸುಧಾರಣೆಗಳ ಮೂಲಕ ಹೂಡಿಕೆಯನ್ನು ಬೆಂಬಲಿಸಲಾಗುತ್ತಿದೆ ಎಂದೂ ಚೌಧರಿ ತಿಳಿಸಿದರು.

