ಜೈಪುರ: ಇಲ್ಲಿನ ಸತ್ಯ ಸಾಯಿ ಪಿಜಿ ಕಾಲೇಜಿನಲ್ಲಿ ಶನಿವಾರ ನಡೆದ ಅಖಿಲ ಭಾರತ ಆಯುಷ್ ಸ್ನಾತಕೋತ್ತರ ಪ್ರವೇಶ ಪರೀಕ್ಷೆಗೆ (ಎಐಎಪಿಜಿಇಟಿ) ಹಾಜರಾಗಿದ್ದ 192 ಅಭ್ಯರ್ಥಿಗಳ ಪೈಕಿ 49 ಮಂದಿ ವಿದ್ಯುತ್ ವ್ಯತ್ಯಯದಿಂದಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಇದೇ ವೇಳೆ, ಪರೀಕ್ಷಾ ಮೇಲ್ವಿಚಾರಕರ ಸಮ್ಮುಖದಲ್ಲೇ ಅಭ್ಯರ್ಥಿಗಳು ನಕಲು ಮಾಡಿದ್ದಾರೆ' ಎಂದು ಕೆಲವು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಪರೀಕ್ಷೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 1ರಂದು ಇಲ್ಲಿನ ರಾಜಸ್ಥಾನ ಮಹಿಳಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮರುಪರೀಕ್ಷೆ ನಡೆಸಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಎಟಿ) ತಿಳಿಸಿದೆ.
ಟ್ರಾನ್ಸ್ಪೋರ್ಟ್ ನಗರದಲ್ಲಿರುವ ಕಾಲೇಜಿನಲ್ಲಿ ಬೆಳಿಗ್ಗೆ 10ರಿಂದ ಪರೀಕ್ಷೆ ಆರಂಭವಾಗಿದ್ದು, ಈ ವೇಳೆ ವಿದ್ಯುತ್ ಕೈಕೊಟ್ಟಿತು. ತುಂಬಾ ಸಮಯದವರೆಗೆ ವಿದ್ಯುತ್ ಬರಲಿಲ್ಲ. ನಂತರ, ಅಭ್ಯರ್ಥಿಗಳು ಹೊರಗೆ ಬಂದು ಪ್ರತಿಭಟಿಸಿದರು ಎಂದು ಅಭ್ಯರ್ಥಿಯೊಬ್ಬರು ತಿಳಿಸಿದ್ದಾರೆ.
'ಶಾರ್ಟ್ ಸರ್ಕಿಟ್ನಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಸ್ವಲ್ಪ ಸಮಯದಲ್ಲೇ ಸಮಸ್ಯೆ ಬಗೆಹರಿಯಲಿದೆ ಎಂದು ಮೇಲ್ವಿಚಾರಕರು ತಿಳಿಸಿದರು. ಆದರೆ, ಕಂಪ್ಯೂಟರ್ ಕಾರ್ಯನಿರ್ವಹಿಸದಿದ್ದರೂ ನನ್ನನ್ನು ಅದರ ಮುಂದೆ ಕುಳಿತುಕೊಳ್ಳುವಂತೆ ಸೂಚಿಸಿದರು. ಪರೀಕ್ಷಾ ಕೇಂದ್ರದಲ್ಲಿ ವಿದ್ಯುತ್ ಬ್ಯಾಕಪ್ ವ್ಯವಸ್ಥೆ ಇರಲಿಲ್ಲ' ಎಂದು ಅವರು ಆರೋಪಿಸಿದ್ದಾರೆ.
'ವಿದ್ಯುತ್ ಕಡಿತಕ್ಕೆ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ನಡೆಸುತ್ತಿದ್ದ ಎಡುಕ್ವಿಟಿ ಕೆರಿಯರ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್ ಕಾರಣ' ಎಂದು ಎನ್ಟಿಎ ಆರೋಪಿಸಿದೆ.
ಶನಿವಾರದಂದು ನಡೆದ ಮೊದಲ ಹಂತದ ಎಐಎಪಿಜಿಇಟಿಗೆ ಒಟ್ಟು 36,979 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ದೇಶದಾದ್ಯಂತ 200 ಪರೀಕ್ಷಾ ಕೇಂದ್ರಗಳಲ್ಲಿ 35,837 ಅಭ್ಯರ್ಥಿಗಳು ಹಾಜರಾಗಿದ್ದರು ಎಂದು ತಿಳಿಸಿದೆ.

