ಹರಿದ್ವಾರ: ಎಲ್ಲಿ ಕಣ್ಣು ಹಾಯಿಸಿದರೂ ಕಸದ ರಾಶಿ. ರಸ್ತೆ, ಘಾಟ್, ನದಿಗಳ ಇಕ್ಕೆಲಗಳಲ್ಲಿಯೂ ತುಂಬಿದ ತ್ಯಾಜ್ಯ.... ಅವುಗಳನ್ನು ಸ್ವಚ್ಛಗೊಳಿಸುತ್ತಿರುವ ಪೌರ ಕಾರ್ಮಿಕರು... ಇದು ಪವಿತ್ರ ನಗರ ಹರಿದ್ವಾರದಲ್ಲಿ ಕಂಡುಬಂದ ದೃಶ್ಯ.
ಶ್ರಾವಣ ಮಾಸದಲ್ಲಿ ಪವಿತ್ರ ಗಂಗಾ ಜಲ ಸಂಗ್ರಹಿಸಲು ಭಕ್ತರು ಹರಿದ್ವಾರಕ್ಕೆ ಪಾದಯಾತ್ರೆ ಮಾಡುತ್ತಾರೆ.
ಇದನ್ನು ಕಾವಡ್ ಯಾತ್ರೆ ಎಂದು ಕರೆಯಲಾಗುತ್ತದೆ. ಈ ವರ್ಷವೂ ಸುಮಾರು 5 ಕೋಟಿ ಭಕ್ತರು ಹರಿದ್ವಾರಕ್ಕೆ ಭೇಟಿ ನೀಡಿದ್ದು, ಅಲ್ಲಿಂದ ತೆರಳುವಾಗ ಸುಮಾರು 7 ಸಾವಿರ ಟನ್ ಕಸವನ್ನು ಬಿಟ್ಟು ಹೋಗಿದ್ದರು.
ಬಟ್ಟೆ ಬದಲಿಸುವ ಕೊಠಡಿಗಳಲ್ಲಿ ಮೂತ್ರ ತುಂಬಿದ ಪ್ಲಾಸ್ಟಿಕ್ ಬಾಟಲಿಗಳನ್ನು ಬಿಟ್ಟುಹೋಗಿರುವುದು ಪೌರ ಕಾರ್ಮಿಕರ ತಾಳ್ಮೆ ಕೆಡಿಸಿದೆ. ಕೈಗವಸು ಧರಿಸಿದೇ ಆ ಬಾಟಲಿಗಳನ್ನು ತೆರವುಗೊಳಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
'ಹರಿದ್ವಾರದಲ್ಲಿ ಕನಿಷ್ಠ 7 ಸಾವಿರ ಟನ್ ಕಸವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸ್ಥಳಾಂತರಿಸಲಾಗಿದ್ದು, ಕಸದ ಬೆಟ್ಟವೇ ನಿರ್ಮಾಣವಾಗಿದೆ' ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಹರಿದ್ವಾರದ ಸ್ಥಿತಿಯ ಬಗ್ಗೆ ಪರಿಸರವಾದಿಗಳು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಯಾತ್ರಿಗಳಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ತುರ್ತಾಗಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಹರಿದ್ವಾರ ಮಾತ್ರವಲ್ಲ, ಗಂಗೋತ್ರಿಯಂತಹ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿಯೂ ಪ್ಲಾಸ್ಟಿಕ್ ಮತ್ತು ಇತರೆ ತ್ಯಾಜ್ಯಗಳ ಸಮಸ್ಯೆ ಕಾಣಿಸಿಕೊಂಡಿದೆ. ಸ್ವಚ್ಛತಾ ಕಾರ್ಯಾಚರಣೆ ನಡೆಸಿ ಸುಮಾರು 57 ಚೀಲಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

