ಈಬಾರಿ ದೇಶವು 80ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನರಲ್ಲಿ ದೇಶಭಕ್ತಿಯ ಕಿಚ್ಚು ಹೊತ್ತಿಸಿದ್ದ ರಾಷ್ಟ್ರೀಯ ಗೀತೆ 'ವಂದೇ ಮಾತರಂ', ಇದೆ ಮೊದಲ ಬಾರಿಗೆ ದೆಹಲಿಯ ಕೆಂಪುಕೋಟೆಯಲ್ಲಿ ಮೊಳಗುತ್ತಿದೆ.
ಸಾಮಾನ್ಯವಾಗಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಧ್ವಜಾರೋಹಣ ನೆರವೇರಿಸಿ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಬಳಿಕ ರಾಷ್ಟ್ರಗೀತೆ 'ಜನ ಗಣ ಮನ' ಹಾಡಲಾಗುತ್ತದೆ. ಆದರೆ ಈ ಬಾರಿ ಕಾರ್ಯಕ್ರಮದಲ್ಲಿ ಹೊಸದಾಗಿ 'ವಂದೇ ಮಾತರಂ' ಗಾಯನವನ್ನು ಸೇರಿಸಲಾಗಿದ್ದು, ಇದು ಕೆಂಪುಕೋಟೆಯ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
'ಸಮಾರಂಭದಲ್ಲಿ ಭಾಗವಹಿಸುವ ಎಲ್ಲಾ ಅತಿಥಿಗಳು, ವಿದ್ಯಾರ್ಥಿಗಳು ಹಾಗೂ ಗಣ್ಯರು 'ವಂದೇ ಮಾತರಂ' ಗಾಯನದ ವೇಳೆ ಎದ್ದು ನಿಂತು ಗೌರವ ಸಲ್ಲಿಸಬೇಕಾಗುತ್ತದೆ. ಈ ವರ್ಷದ ಸ್ವಾತಂತ್ರ್ಯೋತ್ಸವದಲ್ಲಿ ಯುವಶಕ್ತಿಗೆ ವಿಶೇಷ ಒತ್ತು ನೀಡಲಾಗುತ್ತಿದೆ' ಎಂದು ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಇಷ್ಟು ವರ್ಷ ವಂದೇ ಮಾತರಂ ಹಾಡುತ್ತಿರಲಿಲ್ಲ ಏಕೆ?
1947ರಿಂದಲೂ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯ ಧ್ವಜಾರೋಹಣ ಕಟ್ಟುನಿಟ್ಟಿನಿಂದ ಮತ್ತು ಸರ್ಕಾರಿ ಶಿಷ್ಟಾಚಾರಗಳೊಂದಿಗೆ ನಡೆಯುತ್ತಿತ್ತು.
ಧ್ವಜಾರೋಹಣದ ಸಂದರ್ಭದಲ್ಲಿ ಕೇವಲ ರಾಷ್ಟ್ರಗೀತೆಯನ್ನು ನುಡಿಸಿ, ಗೌರವ ಸಲ್ಲಿಸುವುದು ಸಂವಿಧಾನಾತ್ಮಕ ಶಿಸ್ತಿನ ಭಾಗವಾಗಿತ್ತು.
1950ರ ಜನವರಿ 24ರಂದು ಡಾ. ರಾಜೇಂದ್ರ ಪ್ರಸಾದ್ ಅವರು ವಂದೇ ಮಾತರಂಗೆ 'ಜನ ಗಣ ಮನ'ದಷ್ಟೇ ಸಮಾನ ಗೌರವವಿದೆ ಎಂದು ಘೋಷಿಸಿದ್ದರು. ಅದಾದ ನಂತರ ಜನ ಗಣ ಮನ ದೇಶದ ಅಧಿಕೃತ ರಾಷ್ಟ್ರಗೀತೆಯಾಯಿತು. ವಂದೇ ಮಾತರಂ ಅನ್ನು ರಾಷ್ಟ್ರೀಯ ಗೀತೆ ಎಂದು ಗುರುತಿಸಲಾಯಿತು. ಆದರೆ ಧ್ವಜಾರೋಹಣದ ಮಿಲಿಟರಿ ಬಂದೋಬಸ್ತ್ನ ಶಿಷ್ಟಾಚಾರದಲ್ಲಿ ಸೇರಿಸಿರಲಿಲ್ಲ.
1875 ರಲ್ಲಿ ಬಂಕಿಮಚಂದ್ರ ಚಟರ್ಜಿ ಅವರು ರಚಿಸಿದ ಈ ಗೀತೆಯ ಮೊದಲ ಎರಡು ಚರಣಗಳನ್ನು 1937 ರ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರಾಷ್ಟ್ರೀಯ ಗೀತೆಯಾಗಿ ಅಂಗೀಕರಿಸಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ಇದು ಪ್ರಮುಖ ಪಾತ್ರ ವಹಿಸಿದ್ದರೂ, ಸ್ವಾತಂತ್ರ್ಯೋತ್ತರ ದಶಕಗಳಲ್ಲಿ ಪ್ರಧಾನಮಂತ್ರಿಯವರ ಭಾಷಣ, ಧ್ವಜಾರೋಹಣ ಮತ್ತು ಗೌರವ ಕೇವಲ ರಾಷ್ಟ್ರಗೀತೆಗೆ ಸೀಮಿತವಾಗಿದ್ದರಿಂದ, ಕೆಂಪುಕೋಟೆಯ ಪ್ರಮುಖ ವೇದಿಕೆಯಲ್ಲಿ 'ವಂದೇ ಮಾತರಂ' ಗಾಯನ ಇರಲಿಲ್ಲ.
ಈಗ ಸೇರಿಸಿದ್ದೇಕೆ?
ಬಂಕಿಮಚಂದ್ರ ಚಟರ್ಜಿ ಅವರು ಈ ಗೀತೆಯನ್ನು ರಚಿಸಿ 2026ಕ್ಕೆ 150 ವರ್ಷಗಳು ಸಂದಿವೆ. ಈ ಮೈಲಿಗಲ್ಲಿನ ಗೌರವವಾಗಿ ರಕ್ಷಣಾ ಸಚಿವಾಲಯ ವಂದೇ ಮಾತರಂ ಅನ್ನು ಕೆಂಪು ಕೋಟೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನದ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಸೇರಿಸಿದೆ.
ಸರ್ಕಾರದ ಶಿಷ್ಟಾಚಾರಗಳು…
ಪ್ರಧಾನ ಮಂತ್ರಿಯವರು ಕೆಂಪು ಕೋಟೆಗೆ ಬಂದ ನಂತರ ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ನುಡಿಸಲಾಗುತ್ತದೆ. ನಂತರ ಧ್ವಜಾರೋಹಣ ನಡೆಯುತ್ತದೆ. ಬಳಿಕ ರಾಷ್ಟ್ರಗೀತೆ ಜನ ಗಣ ಮನ ಮೊಳಗಲಿದೆ.
ರಾಷ್ಟ್ರಗೀತೆಗೆ ಪ್ರಸ್ತುತ ನೀಡಲಾಗಿರುವ ಕಾನೂನು ರಕ್ಷಣೆಯನ್ನೇ ರಾಷ್ಟ್ರೀಯ ಗೀತೆ 'ವಂದೇ ಮಾತರಂ'ಗೂ ವಿಸ್ತರಿಸಿ, ಅದನ್ನು ಹಾಡುವುದಕ್ಕೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಅಥವಾ ತಡೆಯುವುದನ್ನು ಅಪರಾಧವೆಂದು ಪರಿಗಣಿಸುವ ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ (ಆ.11) ಅಂಕಿತ ಹಾಕಿದ್ದಾರೆ.
ರಾಷ್ಟ್ರಪತಿಯವರ ಅಂಕಿತದೊಂದಿಗೆ, ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ (ತಿದ್ದುಪಡಿ) ವಿಧೇಯಕ-2026 ಈಗ ಕಾನೂನಾಗಿ ಜಾರಿಗೆ ಬಂದಿದೆ.
ಲೋಕಸಭೆಯು ಜುಲೈ 30 ರಂದು ಈ ವಿಧೇಯಕವನ್ನು ಅಂಗೀಕರಿಸಿತ್ತು, ರಾಜ್ಯಸಭೆಯು ಒಂದು ದಿನ ಮುಂಚಿತವಾಗಿ(ಜುಲೈ 29) ಇದಕ್ಕೆ ಒಪ್ಪಿಗೆ ನೀಡಿತ್ತು.

