ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ, ಸಡಗರಗಳೊಂದಿಗೆ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಡಾ. ವೇಣುಗೋಪಾಲ ಭಟ್ ಕಳಯತ್ತೋಡಿ ಧ್ವಜಾರೋಹಣಗೈದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅಂದಿನಿಂದ ಇಂದಿಗೆ ಆದಂತಹ ಬದಲಾವಣೆಗಳ ಬಗ್ಗೆ ಚಿಂತನೆ ಯುವಜನತೆಗೆ ಅಗತ್ಯ ಎಂದು ತಿಳಿಸಿ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗದಂತೆ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ತಂದೆ ತಾಯಿಯರ ಸೇವೆಯನ್ನು ಕಾಳಜಿಯಿಂದ ನೋಡಿಕೊಳ್ಳುವ ಮಕ್ಕಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುಧಾಕರ ರೈ ಮಾತನಾಡಿ, ವಿದ್ಯಾರ್ಥಿಗಳು ದೇಶದ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯಬೇಕೆಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮಧುಸೂದನ ಪಿ ವಿ ಅಧ್ಯಕ್ಷತೆ ವಹಿಸಿ ಸ್ವಾತಂತ್ರ್ಯವನ್ನು ಭದ್ರಗೊಳಿಸುವ ಜವಾಬ್ದಾರಿ ಯುವ ಜನಾಂಗಕ್ಕೆ ಸೇರಿದೆ ಎಂದು ಹೇಳಿದರು. ಶಾಲಾ ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ದೇಶಭಕ್ತಿ ಮೂಡಿಸುವ ಭಾಷಣ, ಸಮೂಹಗಾನ, ಕೆ.ಜಿ ವಿಭಾಗದ ವಿದ್ಯಾರ್ಥಿಗಳು ಹಾಡಿದ ಸುಂದರವಾದ ಸಮೂಹಗೀತೆ, ವಿದ್ಯಾರ್ಥಿಗಳ ಶಿಸ್ತು ಬದ್ದ ಪಥಸಂಚಲನಗಳೇ ಮೊದಲಾದವುಗಳು ಕಾರ್ಯಕ್ರಮಕ್ಕೆ ಮೆರುಗು ತಂದವು.
ವಿದ್ಯಾರ್ಥಿಗಳಾದ ಶ್ರಾವಣಿ ಎಚ್ ಭಂಡಾರಿ ಸ್ವಾಗತಿಸಿ, ಪಿ.ಕೆ. ವೈಶಾಖ್ ವಂದಿಸಿದರು. ಧೃತಿ ರೈ ಹಾಗೂ ಶ್ರೀಯಾ ಎಮ್ ಎಸ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಗಣೇಶ್ ಆಚಾರ್ಯ ಹಾಗೂ ವಿನಯಪಾಲ್ ಕೆ ನೇತೃತ್ವ ವಹಿಸಿದ್ದರು.

.jpg)
.jpg)
