ತಿರುವನಂತಪುರಂ: ಓಣಂ ಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಮಾನವೀಯತೆ ಮೆರೆದಿದ್ದು, ಅಸ್ವಸ್ಥರಾಗಿ ರಸ್ತೆಯಲ್ಲಿ ಬಿದ್ದಿದ್ದ ದಾರಿಹೋಕರೊಬ್ಬರಿಗೆ ನೆರವು ನೀಡಿ ಗಮನ ಸೆಳೆದರು.
ಲೋಕ ಭವನ ಗೇಟ್ ಮೂಲಕ ಹೊರಗೆ ಹೋಗುತ್ತಿದ್ದಾಗ ದಾರಿಹೋಕ ಗಿರೀಶ್ ಅಸ್ವಸ್ಥರಾಗಿದ್ದರು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾದ ಕಾರಣ ಅವರು ರಸ್ತೆಯಲ್ಲಿ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆ ಅವರ ಗಮನಕ್ಕೆ ಬಂದ ತಕ್ಷಣ, ರಾಜ್ಯಪಾಲರು ತಮ್ಮ ವಾಹನದಿಂದ ಇಳಿದು ಗಿರೀಶ್ ಅವರ ಆರೋಗ್ಯ ವಿಚಾರಿಸಿದರು. ಅವರು ಸುಮಾರು 15 ನಿಮಿಷಗಳ ಕಾಲ ಸ್ಥಳದಲ್ಲೇ ಇದ್ದು, ಅವರ ಆರೋಗ್ಯ ವಿಚಾರಿಸಿದರು. ಅಗತ್ಯ ನೆರವು ನೀಡಲು ಮತ್ತು ಗಿರೀಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ರಾಜ್ಯಪಾಲರು ತಮ್ಮ ಸಿಬ್ಬಂದಿಗೆ ಸೂಚಿಸಿದರು.
ರಾಜ್ಯಪಾಲರ ಜೊತೆಗಿದ್ದ ಸಿಬ್ಬಂದಿ ಗಿರೀಶ್ ಅವರಿಗೆ ನೀರು ನೀಡಿ ಮುಖ ತೊಳೆದರು. ರಾಜ್ಯಪಾಲರ ಸಿಬ್ಬಂದಿ ಗಿರೀಶ್ ನೀಡಿದ ಪೋನ್ ಸಂಖ್ಯೆಯನ್ನು ಸಂಪರ್ಕಿಸಿ ಕುಟುಂಬಕ್ಕೆ ಮಾಹಿತಿ ನೀಡಿದರು. ಗಿರೀಶ್ ಅವರ ಮನೆ ವೆಲ್ಲಯಂಬಲಂನಲ್ಲಿರುವ ಅಲ್ತಾರ ದೇವಿ ದೇವಸ್ಥಾನದ ಬಳಿ ಇದೆ. ಕುಟುಂಬವು ದೂರದಲ್ಲಿದ್ದ ಕಾರಣ, ಅವರು ತಕ್ಷಣ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ.
ರಾಜ್ಯಪಾಲರು ಗಿರೀಶ್ ಅವರನ್ನು ಮೊದಲು ಆಸ್ಪತ್ರೆಗೆ ಕರೆದೊಯ್ಯಬೇಕು ಮತ್ತು ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ನಂತರ ಮನೆಗೆ ಕರೆದೊಯ್ಯಬೇಕು ಎಂದು ನಿರ್ದೇಶಿಸಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಯಿತು. ತುರ್ತು ಪರಿಸ್ಥಿತಿಯನ್ನು ಗಮನಿಸಿದ ನಂತರ ರಾಜ್ಯಪಾಲರು ನೇರವಾಗಿ ಮಧ್ಯಪ್ರವೇಶಿಸಿ ಪ್ರಯಾಣವನ್ನು ನಿಲ್ಲಿಸಿ ದಾರಿಹೋಕರಿಗೆ ಸಹಾಯ ಮಾಡಿದರು ಎಂಬುದು ಗಮನಾರ್ಹ.

