ನವದೆಹಲಿ: ಗಂಭೀರ ಪ್ರಕರಣಗಳಲ್ಲಿ ಸತತ 30 ದಿನಕ್ಕೂ ಅಧಿಕ ಜೈಲು ಶಿಕ್ಷೆಗೆ ಗುರಿಯಾಗುವ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿಗಳನ್ನು ವಜಾ ಮಾಡುವ ಮಸೂದೆಯನ್ನು ಪರಿಶೀಲಿಸುತ್ತಿರುವ ಜಂಟಿ ಸಂಸದಿಯ ಸಮಿತಿಗೆ ವರದಿ ಸಲ್ಲಿಸಲು ಶುಕ್ರವಾರ ಕಾಲಾವಕಾಶ ವಿಸ್ತರಿಸಲಾಗಿದೆ.
ಸಂವಿಧಾನ (130ನೇ ತಿದ್ದುಪಡಿ) ಮಸೂದೆ-2025 ಕುರಿತು ಪರಿಶೀಲನೆ ನಡೆಸುತ್ತಿರುವ ಜಂಟಿ ಸಂಸದೀಯ ಸಮಿತಿಗೆ ತನ್ನ ವರದಿಯನ್ನು ಚಳಿಗಾಲದ ಅಧಿವೇಶನದ ಕೊನೆಯ ವಾರದ ಮೊದಲ ದಿನದೊಳಗೆ ಸಲ್ಲಿಸಲು ಅವಕಾಶ ನೀಡುವ ನಿರ್ಣಯವನ್ನು ಲೋಕಸಭೆ ಅಂಗೀಕರಿಸಿದೆ.
ಚಳಿಗಾಲದ ಅಧಿವೇಶನ ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರದಿಂದ ಆರಂಭವಾಗಿ ಕ್ರಿಸ್ಮಸ್ಗೂ ಮುನ್ನ ಕೊನೆಗೊಳ್ಳುತ್ತದೆ.
ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಈ ಜಂಟಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದಾರೆ. ಹೆಚ್ಚಿನ ಸಮಾಲೋಚನೆ ಅಗತ್ಯವಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದರಿಂದ ಕರಡು ವರದಿಯನ್ನು ಅಂಗೀಕರಿಸುವ ಪ್ರಕ್ರಿಯೆಯನ್ನು ಸಮಿತಿ ಇತ್ತೀಚೆಗೆ ಮುಂದೂಡಿತ್ತು.
ಈ ಸಮಿತಿಯು ಸಂವಿಧಾನ (130ನೇ ತಿದ್ದುಪಡಿ) ಮಸೂದೆ-2025 ಅನ್ನು ಪರಿಶೀಲಿಸುತ್ತಿದ್ದು, ಗಂಭೀರ ಆರೋಪಗಳ ಪ್ರಕರಣದಲ್ಲಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಅಥವಾ ಸಚಿವರು ಸತತ 30 ದಿನಗಳು ಜೈಲಿನಲ್ಲಿದ್ದರೆ ಅವರನ್ನು ಹುದ್ದೆಯಿಂದ ಅನರ್ಹಗೊಳಿಸುವ ಪ್ರಸ್ತಾವಿತ ಕಾನೂನಿನ ಕುರಿತು ಅಧ್ಯಯನ ನಡೆಸುತ್ತಿದೆ.

